ಬೆಳ್ತಂಗಡಿ, ನ.25 (DaijiworldNews/PY): ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಪಲ್ಲಕ್ಕಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೆಗಲು ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪಲ್ಲಕ್ಕಿ ಹೊರಲು ಶಾಸಕರನ್ನು ಕರೆತಂದ ಯುವಕರು ದೇವಸ್ಥಾನಲ್ಲಿ ತಪ್ಪುಕಾಣಿಕೆ ಹಾಕಿ ಕ್ಷಮೆಯಾಚಿಸಿರುವುದಾಗಿ ತಿಳಿದುಬಂದಿದೆ.
ದೇವಾಲಯದ ಆಡಳಿತ ಮಂಡಳಿ ತುರ್ತು ಸಭೆ ಕರೆದ ನಂತರ ಕಾಶೀಮಠದ ಸ್ವಾಮೀಜಿಯವರ ಬಳಿಕ ಘಟನೆಗೆ ಕಾರಣರಾದ ಯುವಕರನ್ನು ಕರೆತಂದು ಈ ವಿಚಾರವನ್ನು ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ದೇವರ ನಡೆಯಲ್ಲಿ ತೆಂಗಿನಕಾಯಿ ಇಟ್ಟು ತಮ್ಮಿಂದ ಆದ ಪ್ರಮಾದದ ಕುರಿತು ದೇವರಲ್ಲಿ ತಪ್ಪು ನಿವೇದನೆ ಮಾಡಿ ಕ್ಷಮಾಪಣೆ ಕೇಳಬೇಕು ಎಂದು ಸ್ವಾಮೀಜಿ ಯುವಕರಿಗೆ ತಿಳಿಸಿದ್ದಾರೆ. ಸ್ವಾಮೀಜಿಯ ಸೂಚನೆಯಂತೆ ಇಬ್ಬರು ಯುವಕರು ಬುಧವಾರ ತಪ್ಪುಕಾಣಿಕೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಲಾಯಿಲ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಹುಣ್ಣಿಮೆಯ ದೀಪೋತ್ಸವದ ಪ್ರಯುಕ್ತ ರಾತ್ರಿ ಪೇಟೆ ಸವಾರಿ ಪಲ್ಲಕ್ಕಿ ಉತ್ಸವ ನಡೆದಿತ್ತು. ಈ ಸಂದರ್ಭ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಊರಿಗೆ ತೆರಳುತ್ತಿದ್ದರು. ಪಲ್ಲಕ್ಕಿ ಉತ್ಸವವು ರಾತ್ರಿ ಬೆಳ್ತಂಗಡಿ ನಗರದ ಮಧ್ಯಭಾಗ ತಲುಪಿದ್ದನ್ನು ಕಂಡು ಹರೀಶ್ ಪೂಂಜಾ ಅವರು ಕಾರಿನಿಂದ ಇಳಿದು ದೇವರ ಪಲ್ಲಕ್ಕಿ ಕಡೆಗೆ ತೆರಳಿ ಕೈ ಮುಗಿದು ಪ್ರಸಾದ ಸ್ವೀಕರಿಸಿದ್ದರು. ಈ ವೇಳೆ ಕೆಲ ಯುವಕರು ಅವರನ್ನು ಕರೆತಂದು ಪಲ್ಲಕ್ಕಿಗೆ ಹೆಗಲು ಕೊಡಲು ಹೇಳಿದ್ದು, ಅದರಂತೆ ಅವರು ಪಲ್ಲಕ್ಕಿಗೆ ಹೆಗಲು ಕೊಟ್ಟು ಸ್ವಲ್ಪ ದೂರ ಸಾಗಿದ್ದರು. ಆದರೆ, ಸಂಪ್ರದಾಯ ಮುರಿದು ಪಲ್ಲಕ್ಕಿ ಹೊತ್ತ ಶಾಸಕ ಹರೀಶ್ ಪೂಂಜಾ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ದ ಸಮುದಾಯದ ಒಳಗೆ ಆಕ್ರೋಶ ವ್ಯಕ್ತವಾಗಿತ್ತು.