ಉಡುಪಿ, ನ 25 (DaijiworldNews/MS): ಎರಡು ನಂಬರ್ ಪ್ಲೇಟ್ ಹೊಂದಿದ್ದ ಲಾರಿಯೊಂದು ಟ್ರಿಪ್ ಶೀಟ್ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಪತ್ತೆ ಹಚ್ಚಿ ದೂರು ನೀಡಿದರೂ, ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖಾಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದ ಘಟನೆ ನಡೆದಿದೆ.
ಅಕ್ರಮ ಮರುಳು ಸಾಗಾಟ ಮಾಡುತ್ತಿದ್ದ ಎರಡು ನೊಂದಣಿ ಸಂಖ್ಯೆ ಹೊಂದಿದ್ದ ಲಾರಿಯನ್ನು ಕಂಡು ಲಾರಿ ಮಾಲಕರ ಒಕ್ಕೂಟ ಪದಾಧಿಕಾರಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಉಡುಪಿ ನಗರ ಠಾಣೆಯಿಂದ ಆಗಮಿಸಿದ ಪೊಲೀಸ್ ಪೇದೆ ವಾಹನದ ಪೋಟೋ ತೆಗೆದು, ವಾಹನವನ್ನು ಠಾಣೆಗೆ ಕೊಂಡೊಯ್ಯಲು ಸೂಚಿಸಿದರು.
ಆದರೆ ಗಣಿ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವ ಮೊದಲೇ ಮರಳು ಅನ್ ಲೋಡ್ ಮಾಡಿಸಿದ ಲಾರಿ ಮಾಲಿಕ ಸ್ಥಳದಲ್ಲೂ ನಿಲ್ಲದೆ ಠಾಣೆಗೂ ಹೋಗದೆ ಲಾರಿ ಸಮೇತ ಪರಾರಿಯಾಗಿ ಪಡು ಅಲೆವೂರಿನತ್ತ ಹೊರಟುಹೋಗಿದ್ದ ಈ ಎಲ್ಲಾ ಘಟನೆ ಬಳಿಕ ಸುಮಾರು ಅರ್ಧ ಗಂಟೆ ಬಳಿಕ ಸ್ಥಳಕ್ಕೆ ಆಗಮಿಸಿದ ಗಣಿ ಅಧಿಕಾರಿಯೂ ಘಟನಾ ಸ್ಥಳದಲ್ಲಿ ಲಾರಿ ಇಲ್ಲದಿರುವುದನ್ನು ಕಂಡು ವಾಹನದಲ್ಲಿಯೇ ಕುಳಿತು ಪರಿವೀಕ್ಷಣೆ ನಡೆಸಿ ಬಂದ ಹಾಗೆ ವಾಪಾಸ್ ತೆರಳಿದ್ದಾರೆ.
ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರುಳುಗಾರಿಕೆ ಪ್ರಕರಣ ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಗಣಿ ಇಲಾಖಾಧಿಕಾರಿಗಳು ಮರಳು ಸಾಗಾಟಗಾರರು, ದಕ್ಕೆ ಪರವಾನಿಗೆದಾರರ ಕೈಯಡಿಯಾಳಾಗಿ ಬದುಕುತ್ತಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.