ಪುತ್ತೂರು, ನ. 24 (DaijiworldNews/SM): ಕೃಷಿ ಭೂಮಿಯನ್ನು ನೋಡಲು ಬಂದ ಫೋಟೋಗ್ರಾಫರ್ ಒಬ್ಬರನ್ನು ಸಂಬಂಧಿಕರೇ ಕೊಲೆ ಮಾಡಿ ಕಾಡಿನ ಮಧ್ಯೆ ಹೂತು ಹಾಕಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಗುಳಿ ಎಂಬಲ್ಲಿ ನಡೆದಿದೆ.
ಮೈಸೂರಿನ ಸುಬ್ರಹ್ಮಣ್ಯ ನಗರದ ಜಗದೀಶ್(58) ಕೊಲೆಯಾದ ವ್ಯಕ್ತಿಯಾಗಿದ್ದು, ನವಂಬರ್ 17 ರಂದು ಪುತ್ತೂರಿನ ಕುಂಜೂರುಪಂಜ ಎಂಬಲ್ಲಿರುವ ತನ್ನ ಕೃಷಿಭೂಮಿಯನ್ನು ನೋಡಲು ಮೈಸೂರಿನಿಂದ ಪುತ್ತೂರಿಗೆ ಬಂದಿದ್ದರು.
ಈ ಕೃಷಿಭೂಮಿಯನ್ನು ಮುಗುಳಿ ನಿವಾಸಿ ವಿಲಿಯರ್ಸ್ ಸುಬ್ಬಯ್ಯ ಅಲಿಯಾಸ್ ಬಾಲಕೃಷ್ಣ ರೈ ಎಂಬವರ ಜೊತೆ ಸೇರಿ ಸುಮಾರು ಎರಡೂವರೆ ಎಕರೆ ಜಾಗ ಖರೀದಿಸಿದ್ದರು. ಈ ಜಾಗದ ಖರೀದಿಯ ಬಳಿಕ ಜಾಗವನ್ನು ನೊಂದಣಿ ಮಾಡಲು ಜಗದೀಶ್ ಸಂಬಂಧಿ ಬಾಲಕೃಷ್ಣ ರೈ ಹಿಂದೇಟು ಹಾಕಿದ್ದರು. ಪುತ್ತೂರಿನ ಆರ್ಯಾಪು ಗ್ರಾಮದ ಕುಂಜೂರು ಪಂಜದಲ್ಲಿ ಜಮೀನನ್ನು ಖರೀದಿಸಿರುವ ಜಗದೀಶ್ ಆ ಜಾಗದಲ್ಲಿ ಮನೆ ನಿರ್ಮಿಸಿ ಪುತ್ತೂರಿನಲ್ಲೇ ಸೆಟಲ್ ಆಗಲು ತೀರ್ಮಾನಿಸಿದ್ದರು. ಈ ನಡುವೆ ಈ ಜಾಗವನ್ನು ಜಗದೀಶ್ ರೈ ಅವರ ಗಮನಕ್ಕೆ ತಾರದೆ ಬಾಲಕೃಷ್ಣ ರೈ ತಮ್ಮ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಲು ತೀರ್ಮಾನಿಸಿದ್ದರು. ಈ ವಿಚಾರದ ಬಗ್ಗೆ ಮಾತುಕತೆ ನಡೆಸಲು ಜಗದೀಶ್ ನವಂಬರ್ 17 ರಂದು ಮೈಸೂರಿನಿಂದ ಪುತ್ತೂರಿಗೆ ಬಂದಿದ್ದರು.
ಪುತ್ತೂರಿಗೆ ಬಂದ ಬಳಿಕ ಜಗದೀಶ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅನುಮಾನಗೊಂಡ ಜಗದೀಶ್ ಮನೆಯವರು ಮೈಸೂರಿನಲ್ಲಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಜಗದೀಶ್ ನಾಪತ್ತೆಯ ವಿಚಾರವಾಗಿ ಪೊಲೀಸರು ಬಾಲಕೃಷ್ಣ ರೈ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಆರೋಪಿ ಬಾಲಕೃಷ್ಣ ರೈ ಪೊಲೀಸರಿಗೆ ಜಗದೀಶ್ ನವಂಬರ್ 18 ರಂದೇ ಮೈಸೂರಿಗೆ ವಾಪಾಸು ಹೋಗಿದ್ದಾರೆ, ಹಾಗೂ ಅವರನ್ನು ಮಾರುತಿ ಓಮ್ನಿ ಕಾರಿನಲ್ಲೇ ತಾನೇ ಸುಳ್ಯಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದರು.
ಈ ಹಿನ್ನಲೆಯಲ್ಲಿ ಪೊಲೀಸರು ಜಗದೀಶ್ ಅವರ ಪತ್ತೆಗಾಗಿ ಶೋಧ ನಡೆಸಿದ್ದರು. ಈ ನಡುವೆ ಆರೋಪಿ ಬಾಲಕೃಷ್ಣ ರೈ ನೀಡಿದ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರಿಗೆ ಆರೋಪಿಯು ಜಗದೀಶ್ ಅವರನ್ನು ಮಾರುತಿ ಒಮ್ನಿ ಕಾರಿನಲ್ಲಿ ಸುಳ್ಯಕ್ಕೆ ಕಳುಹಿಸಿದ ಕುರಿತ ಯಾವುದೇ ಕುರುಹು ದೊರೆತಿಲ್ಲ. ಪುತ್ತೂರಿನ ಕಾವು ಎಂಬಲ್ಲಿ ಕಾರು ನಿಲ್ಲಿಸಿ ಸುಳ್ಯಕ್ಕೆ ಕಳುಹಿಸಿರುವುದಾಗಿ ಹೇಳಿಕೆ ನೀಡಿರುವುದನ್ನು ಪರಿಶೀಲಿಸಿದ ಸ್ಥಳೀಯ ಪೊಲೀಸರು ಕಾವಿನ ಮಸೀದಿಯೊಂದರ ಸಿಸಿ ಕ್ಯಾಮಾರಾವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಆರೋಪಿ ಹೇಳಿದ ಸಮಯದಲ್ಲಿ ಇಂಥಹ ಯಾವುದೇ ಘಟನೆ ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಅನುಮಾನದ ಹಿನ್ನಲೆಯಲ್ಲಿ ಆರೋಪಿ ಬಾಲಕೃಷ್ಣ ರೈಯನ್ನು ಸೂಕ್ತ ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ತನ್ನ ಮಗ ಹಾಗೂ ಇನ್ನೊಬ್ಬ ಯುವಕನ ಜೊತೆ ಸೇರಿಕೊಂಡು ಜಗದೀಶ್ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಪೋಲೀಸರು ಬಾಲಕೃಷ್ಣ ರೈ, ಆತನ ಮಗ ಪ್ರಶಾಂತ್ ರೈ ಹಾಗೂ ಜೀವನ್ ಗೌಡ ಎಂಬ ಮೂವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂಪ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕೊಲೆ ಬಳಿಕ ರಕ್ಷಿತಾರಾಣ್ಯದಲ್ಲಿ ಹೂತು ಹಾಕಿದ್ದರು
ಆರೋಪಿಗಳು ಸುತ್ತಿಗೆಯಿಂದ ಜಗದೀಶ್ ತಲೆಗೆ ಹೊಡೆದು ಕೊಲೆ ನಡೆಸಿರುವ ಸಾಧ್ಯತೆಯಿದ್ದು, ಈ ಸಂಬಂಧ ಪೊಲೀಸರು ಕೊಲೆಗೆ ಬಳಸಿದ ಮಾರಕಾಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ನಡೆಸಿದ ಬಳಿಕ ಆರೋಪಿಗಳು ಜಗದೀಶ್ ಶವವನ್ನು ಮುಗುಳಿ ರಕ್ಷಿತಾರಣ್ಯದಲ್ಲಿ ಮಣ್ಣಿನಲ್ಲಿ ಹೂತಿದ್ದು, ಯಾರಿಗೂ ಸಂಶಯ ಬಾರದ ರೀತಿಯಲ್ಲಿ ರಾತ್ರೋರಾತ್ರಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ.
ಜಗದೀಶ್ ಅವರನ್ನು ಕೊಲೆ ನಡೆಸಿದ ಬಳಿಕ ಆರೋಪಿಗಳು ಕೊಲೆಯ ಬಗ್ಗೆ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಜಗದೀಶ್ ಅವರ ಮೊಬೈಲ್ ಪೋನನ್ನು ನವಂಬರ್ 18 ರಂದೇ ಜಗದೀಶ್ ಮನೆಯ ಪಕ್ಕದಲ್ಲೇ ಎಸೆದು ಹೋಗಿದ್ದು, ಪೊಲೀಸರು ಮೊಬೈಲ್ ನ ಲೊಕೇಶನ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಗದೀಶ್ ಮೊಬೈಲ್ ಮೈಸೂರಿನಲ್ಲೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಆರೋಪಿಗಳ ಬಗ್ಗೆ ಪೊಲೀಸರಿಗೆ ಮೊದಲಿಗೆ ಯಾವುದೇ ಸಂದೇಹ ಬಂದಿರಲಿಲ್ಲ.