ಮಂಗಳೂರು, ನ. 24 (DaijiworldNews/SM): ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುವ ಮಂಗಳೂರು ನಗರಕ್ಕೆ ಕೇರಳ ಭಾಗದ ಅನೇಕ ವಿದ್ಯಾರ್ಥಿಗಳು ಅವಲಂಬಿತರಾಗಿದ್ದಾರೆ. ಅದರಲ್ಲೂ ಗಡಿ ಪ್ರದೇಶ ಕಾಸರಗೋಡಿನ ವಿದ್ಯಾರ್ಥಿಗಳಿಗೆ ಕಾಲೇಜು ಉನ್ನತ ಶಿಕ್ಷಣ, ಮೆಡಿಕಲ್ ಕಾಲೇಜುಗಳಿಗೆ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕಾಸರಗೋಡಿಗರಿಗೆ ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ ಸೇರಿದಂತೆ ಇನ್ನಿತರ ಅಗತ್ಯತೆಗಳಿಗೆ ಆಸರೆಯಾಗಿದೆ. ಹೀಗೆ ಮಂಗಳೂರನ್ನು ಅವಲಂಬಿಸಿರುವವರಲ್ಲಿ ನಿತ್ಯ ಪ್ರಯಾಣಿಕರು ಅಧಿಕವಾಗಿದ್ದು, ಅಗ್ಗ ಹಾಗೂ ಕ್ಲಪ್ತ ಸಮಯದ ಪ್ರಯಾಣಕ್ಕೆ ರೈಲುಗಳನ್ನೇ ಅವಲಂಬಿಸಿದ್ದರು. ಆದರೆ, ಕೊರೋನಾ ಕ್ವಕ್ಕರಿಸಿದ ಬಳಿಕ ಚೆರ್ವತ್ತೂರು-ಮಂಗಳೂರು ಮಧ್ಯೆ ಇದ್ದ ರೈಲು ಸಂಚಾರವಿಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವೈದ್ಯಕೀಯ ಅಗತ್ಯತೆಗೆ ಆಗಮಿಸುವವರು ಪರದಾಡುವಂತಾಗಿದೆ. ಈ ಕಾರಣದಿಂದಾಗಿ ರೈಲು ಸಂಚಾರ ಆರಂಭಿಸಬೇಕೆಂಬ ಒತ್ತಾಯ ನಿರಂತರವಾಗಿ ಕೇಳಿಬರುತ್ತಿದೆ.
ಈದೀಗ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ಸೂಕ್ತ ಸಮಯದಲ್ಲಿ ರೈಲು ಸಂಚಾರವಿಲ್ಲದ ಕಾರಣದಿಂದ ವಿದ್ಯಾರ್ಥಿಗಳ ನಿತ್ಯ ಪ್ರಯಾಣಕ್ಕೆ ಬಸ್ ಗಳನ್ನೇ ಅವಲಂಬಿಸಿದ್ದಾರೆ. ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರಿಯಾಯಿತಿ ಇಲ್ಲ. ನಿತ್ಯ ೧೦೦ ರಿಂದ ೧೫೦ ರೂಪಾಯಿ ವೆಚ್ಚ ಮಾಡಿಕೊಂಡು ಬರಬೇಕಾಗಿದ್ದು, ಮಧ್ಯಮ ವರ್ಗ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಹೊರೆಯಾಗತೊಡಗಿದೆ. ಅಲ್ಲದೆ, ಕಾಲೇಜಿನಿಂದ ಮರಳಿ ಸರಿಯಾದ ಸಮಯಕ್ಕೆ ಮನೆ ತಲುಪುವುದು ಅಸಾಧ್ಯವಾಗಿದೆ.
ಇನ್ನು ಅನೇಕ ಬಡ ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿ ರೈಲಿನ ಮೂಲಕವೇ ಕಾಸಗೋಡಿನಿಂದ ಮಂಗಳೂರಿಗೆ ಬರುತ್ತಿದ್ದರು. ಈ ಪೈಕಿ ದಿನಗೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿದ್ದು, ಲೆಕ್ಕಾಚಾರದಲ್ಲೇ ಜೀವನ ನಿರ್ವಹಣೆ ಮಾಡುವವರಾಗಿದ್ದಾರೆ. ಆದರೆ, ರೈಲು ಸಂಚಾರವಿಲ್ಲದ ಕಾರಣ ಇದೀಗ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸುವ ದುಸ್ಥಿತಿ ಎದುರಾಗಿದೆ. ಮತ್ತೆ ಕೆಲ ವಿದ್ಯಾರ್ಥಿಗಳು ವಾರದಲ್ಲಿ ಕೇಲವ ೨ರಿಂದ ೩ ದಿನ ಮಾತ್ರವೇ ಕಾಲೇಜಿಗೆ ಹಾಜರಾಗುವ ಪರಿಸ್ಥಿತಿ ಇದೆ.
ಇನ್ನು ರೈಲು ಸಂಚಾರ ಆರಂಭಿಸಬೇಕೆಂದು ವಿದ್ಯಾರ್ಥಿಗಳು ನಿರಂತರ ಆಗ್ರಹಿಸುತ್ತ ಬಂದಿದ್ದು, ರೈಲ್ವೇ ಅಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದಾರೆ. ಇದೀಗ ರೈಲ್ವೇ ನಿಲ್ದಾಣ ಪರಿಸರದಲ್ಲಿ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ರೈಲು ಸಂಚಾರ ಆರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಿಗಳು ನೀಡಿದ್ದಾರೆ.
ಸದ್ಯ ಗಡಿಭಾಗ ಕೇರಳದಿಂದ ಮಂಗಳೂರಿಗೆ ಆಗಮಿಸುವ ಮದ್ಯಮ ವರ್ಗದ ವಿದ್ಯಾರ್ಥಿಗಳು ರೈಲು ಸಂಚಾರವಿಲ್ಲದೆ ಪರದಾಡುವಂತಾಗಿದ್ದು ಚರ್ವತೂರು ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಮತ್ತೆ ಆರಂಭಿಸುವಂತೆ ವಿದ್ಯಾರ್ಥಿಗಳ ಆಗ್ರಹವಾಗಿದೆ.