ಕಾರ್ಕಳ, ನ.24 (DaijiworldNews/PY): "ಕಲಾಸಕ್ತ ಮನಸ್ಸುಗಳನ್ನು ಒಂದು ಮಾಡುವಂತೆ ನೃತ್ಯ,ನಾಟಕ, ಸಂಗೀತ ಇತ್ಯಾದಿಗಳಲ್ಲಿ ತರಬೇತಿ ಪಡೆಯಲು ರಾಜ್ಯದ ಬೇರೆಬೇರೆ ಕಡೆಗಳಲ್ಲಿ ರಂಗಾಯಣಗಳಿವೆ. ಯಕ್ಷಗಾನವನ್ನು ಪ್ರಧಾನವನ್ನಾಗಿಸಿ ಯಕ್ಷನಾಟಕ ರಂಗಾಯಣವನ್ನು ಕಾರ್ಕಳದಲ್ಲೇ ಸ್ಥಾಪಿಸುವ ಚಿಂತನೆ ನಡೆಸಿದ್ದೇನೆ" ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ಹೇಳಿದರು.
ನಗರದ ಮಾರಿಯಮ್ಮ ಶ್ರೀ ಕ್ಷೇತ್ರದ ವಠಾರದಲ್ಲಿ ಕಾರ್ಕಳದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ,) ಮಂಗಳೂರು ಇದರ ಕಾರ್ಕಳ ಘಟಕದ ವತಿಯಿಂದ ಆಯೋಜಿಸಿದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, "ಧಾರ್ಮಿಕ ಚಿಂತನೆಯುಳ್ಳ ಆರಾಧನಾ ಕಲೆ ಯಕ್ಷಗಾನ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ" ಎಂದರು.
ಪಟ್ಲ ಪೌಂಡೇಶನ್ನ ಆರನೇ ಸಂಭ್ರಮ ಹಾಗೂ ಯಕ್ಷಕಲಾರಂಗದ 10ನೇ ವರ್ಷಾರಂಭದ ಅಂಗವಾಗಿ ಜಂಟಿಯಾಗಿ ನಡೆದ ಸಮಾರಂಭದಲ್ಲಿ ಸಚಿವ ವಿ.ಸುನೀಲ್ ಕುಮಾರ್, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಅವರಿಗೆ ಕಲಾಗೌರವ ನೀಡಿ ಗೌರವಿಸಿದರು.
ಕಲಾಸಾಧಕ ಪ್ರೋ.ಬಿ.ಪದ್ಮನಾಭ ಗೌಡ, ಯಕ್ಷಗುರು ಮಹಾವೀರ ಪಾಂಡಿ ಕಾಂತಾವರ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಕಾರ್ಕಳ ಕೇರ್ದಡ್ಡು ವೃಷಭರಾಜ ಕಡಂಬ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ವಿಜಯ ಶೆಟ್ಟಿ ಸ್ವಾಗತಿಸಿದರು. ಬೇಬಿ.ಕೆ ಈಶ್ವರಮಂಗಲ ನಿರೂಪಿಸಿದರು. ಜನಾರ್ಧನ ನಾಯಕ್ ವಂದಿಸಿದರು.
ಬಳಿಕ ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ ಧರ್ಮಸಿಂಹಾಸನ ಬಯಲಾಟ ಜರಗಿತು.