Santhosh M
ಮಂಗಳೂರು, ನ. 23 (DaijiworldNews/SM): ಅದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ತನ್ನ ಸ್ನೇಹಿತರೊಂದಿಗೆ ಏನು ಅರಿವಿಗೆ ಬಾರದ ಬಾಲಕಿಯೊಬ್ಬಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಮ ಪಿಶಾಚಿಗಳ ಕರಿ ನೆರಳು ಆಕೆಯ ಮೇಲೆ ಬೀರಿದೆ. ಮನುಷ್ಯತ್ವವೇ ಇಲ್ಲದ ಕ್ರೂರಿಯೊಬ್ಬ ಅಮಾಯಕ ಬಾಲಕಿಯ ಮೇಲೆ ಎರಗಿದ್ದ. ಆಕೆಯ ದೇಹ ಸುಖ ಅನುಭವಿಸಿ ಹತ್ಯೆ ನಡೆಸಿ ಚರಂಡಿಯಲ್ಲಿ ಆಕೆಯ ಮೃತದೇಹವನ್ನು ಎಸೆದು ಅಮಾನವೀಯತೆ ಮೆರೆದಿದ್ದ.
ನವಂಬರ್ 21ರ ರವಿವಾರ ಸಂಜೆ ಮಂಗಳೂರಿನ ಉಳಾಯಿಬೆಟ್ಟು ಪರಾರಿ ಎಂಬಲ್ಲಿ ನಡೆದ ಆ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಅಮಾಯಕ ಜೀವವೊಂದು ಕಾಮಾಂದರ ಕೈಗೆ ಸಿಕ್ಕಿ ಛಿದ್ರವಾಗಿತ್ತು. ತಮ್ಮ ಮಗಳು ಇತರ ಮಕ್ಕಳ ಜೊತೆ ಆಟವಾಡುತ್ತಿದ್ದಾಳೆ ಎಂದುಕೊಂಡಿದ್ದ ಆಕೆಯ ಪೋಷಕರಿಗೆ ಅರಗಿಸಿಕೊಳ್ಳಲಾಗದ ಸುದ್ದಿಯೊಂದು ಕಾದಿತ್ತು. ಆಟ ಮುಗಿಸಿ ಖುಷಿಯಾಗಿ ಮನೆ ಸೇರಬೇಕಿದ್ದ ಮಗು ಕಾಮುಕನ ನೀಚ ಕೃತ್ಯದಿಂದಾಗಿ ಚರಂಡಿ ಸೇರಿದ್ದಳು. ಮಗಳನ್ನು ಮುದ್ದಾಡುವ ಆಸೆಯಲ್ಲಿದ್ದ ತಂದೆ ತಾಯಿಗೆ ಶವವನ್ನೇ ಎತ್ತಿಕ್ಕೊಳ್ಳುವ ಕಠಿಣ ಕ್ಷಣ ಎದುರಾಗಿತ್ತು. ಯಾವ ಪೋಷಕರಿಗೆ ತಾನೇ ತಮ್ಮ ಮಕ್ಕಳ ಶವ ಕೈಯಲ್ಲಿ ಎತ್ತಿಕೊಳ್ಳಲು ಸಾಧ್ಯ? ಮಗುವನ್ನು ಶವವಾಗಿ ನೋಡಲು ಯಾವ ಪೋಷಕರು ತಾನೆ ಬಯಸುವರು?
ರಾಜಕೀಯ ಪಕ್ಷಗಳು, ಸಂಘಟನೆಗಳು ಮೌನಕ್ಕೆ ಶರಣು
ಕರಾವಳಿಯಲ್ಲಿನ ಜನತೆ ವಿದ್ಯಾವಂತರು. ಅನ್ಯಾಯವನ್ನು ಖಂಡಿಸುವ ಶಕ್ತಿ ಸಾಮಾರ್ಥ್ಯವುಳ್ಳವರು. ಸಣ್ಣಪುಟ್ಟ ವಿಚಾರಗಳಿಗೂ ಧಾರ್ಮಿಕ ಬಣ್ಣ ಬಳಿದು ರಾಜಕೀಯವಾಗಿ ಅನೇಕರು ಇದರ ಲಾಭ ಪಡೆಯುವವರಿದ್ದಾರೆ. ಆದರೆ, ಇಂದು ಹೊರ ರಾಜ್ಯದ ಅಮಾಯಕ ಬಾಲಕಿಯ ಅತ್ಯಾಚಾರ ಹತ್ಯೆ ನಡೆದ ಸಂದರ್ಭದಲ್ಲಿ ಆಕೆಗೆ ಸಹೋದರರಾಗುವವರೇ ಇಲ್ಲವಾಯಿತು. ಆಕೆಯ ಪರ ಧ್ವನಿ ಎತ್ತುವವರು ಇಲ್ಲದಾಗಿ ಮೃತ ಬಾಲಕಿ ಅನಾಥಳಾದಳು.
ಸಣ್ಣ ಪುಟ್ಟ ಘಟನೆಗಳು ನಡೆಯುವ ಸಂದರ್ಭದಲ್ಲಿ ಧ್ವನಿಎತ್ತುವ ಅನೇಕ ನಾಮಾಂಕಿತ ಸಂಘಟನೆಗಳು, ರಾಜಕೀಯ ಪಕ್ಷಗಳು ಇಂದು ಬಾಲಕಿಯಂತೆ ಜೀವಂತ ಶವವಾಗಿವೆಯೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಲಾಭಗಳಿದ್ದರಷ್ಟೇ ಹೋರಾಟ, ನ್ಯಾಯಕ್ಕಾಗಿ ಹೋರಾಟ ಇಲ್ಲ ಎಂಬುವುದು ಇಂದು ಪಕ್ಷ ಸಂಘಟನೆಗಳು ಸಾಬೀತುಪಡಿಸಿದಂತಾಗಿದೆ. ಕಾರ್ಮಿಕರ ಧ್ವನಿಯಾಗುವ ಸಂಘಟನೆಗಳು ಕೂಡ ಮೌನಕ್ಕೆ ಶರಣಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇಲ್ಲಿ ಬಾಲಕಿಯೊಬ್ಬಳ ಹತ್ಯೆಯಾಗಿದ್ದಲ್ಲ. ಬದಲಾಗಿ ಮಾನವೀಯತೆ, ಕಾರ್ಮಿಕ ವರ್ಗದ ಧ್ವನಿಯ ಹತ್ಯೆಯಾಗಿದೆ.
ಬಡ ಕಾರ್ಮಿಕರ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?
ಹತ್ಯೆ ನಡೆದ ಕಾರ್ಖಾನೆಯಲ್ಲಿ ಸಿಸಿ ಟಿವಿ ಕಣ್ಗಾವಲು ಇರಿಸುವುದು ನಿಯಮ. ಇಲ್ಲಿ ನಿಯಮ ಪಾಲಾನೆಯಾಗಿದೆ. ಆದರೆ, ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಿಲ್ಲ. ಈ ಹಿನ್ನೆಲೆ ಘಟನೆಯ ಸಂದರ್ಭ ಸೆರೆಯಾಗಿಲ್ಲ. ಇಲ್ಲಿ ಯಾವುದೋ ಒಂದು ಕಾಣದ ಕೈ ಪ್ರಭಾವ ಬೀರಿದಂತೆ ಕಾಣುತ್ತಿದ್ದು, ಅದೇ ಪ್ರಭಾವದಿಂದ ಮಾನವ ಸಮಾಜದಿಂದ ಮಗುವಿನ ಹತ್ಯೆಯನ್ನು ದೂರವಾಗಿಸಿ ಅನ್ಯಾಯವನ್ನು ಚರಂಡಿಯಡಿ ಹೂತು ಹಾಕುವ ಕಾರ್ಯವೊಂದು ಸದ್ದಿಲ್ಲದೆ ನಡೆಯುತ್ತಿದೆ?
ಸ್ಥಳೀಯ ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ಇಲ್ಲಿ ಬೆಂಕಿಯುಂಡೆಯ ಎದುರು ಬೆವರುವ ಕುಟುಂಬದ ಅಳಲು ಆಲಿಸುವ ಪ್ರಯತ್ನ ನಡೆಸಿಲ್ಲ. ದೇಶದ ಇನ್ಯಾವುದೋ ಮೂಲೆಯಲ್ಲಿ ನಡೆದ ಮುಖವಾಣಿಯಿಲ್ಲದ ಸನ್ನಿವೇಷವನ್ನು ವೈಭವಿಕರಿಸುವವರು ಕಣ್ಣೆದುರೇ ಅನ್ಯಾಯವಾದರೂ ಅದನ್ನು ಖಂಡಿಸುವ ಶಕ್ತಿ ಹೊಂದಿಲ್ಲ. ಇದೀಗ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವವರು ಇಲ್ಲದಂತಾಗಿದೆ. ಮಾನವೀಯತೆ ಇಲ್ಲಿ ಸತ್ತು ಮಣ್ಣುಪಾಲಾಗಿದೆ.
ಆರೋಪಿಗಳ ಪತ್ತೆಗೆ ಯಾಕಿಷ್ಟು ತಡ?
ಇನ್ನು ಪ್ರಕರಣ ನಡೆದು ಎರಡು ದಿನಗಳೇ ಕಳೆದಿದೆ. ಸ್ಥಳೀಯರು ಹೇಳುವಂತೆ ಕಾರ್ಖಾನೆಯೊಳಗೆ ರವಿವಾರದಂದು ಯಾವುದೇ ಸ್ಥಳೀಯರು ತೆರಳುವುದಿಲ್ಲ. ಹೊರ ಆವರಣದ ಗೇಟ್ ಗೆ ಬೀಗ ಹಾಕಲಾಗುತ್ತದೆ. ಹಾಗಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದವರ ಪೈಕಿ ಯಾರೋ ಈ ಕೃತ್ಯ ನಡೆಸಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯವಾಗಿಲ್ಲ. ಇನ್ನೆಷ್ಟು ದಿನಗಳು ಬೇಕೆಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ?
ಅತ್ಯಾಚಾರದ ಆರೋಪಿಗಳನ್ನು ಸಾರ್ವಜನಿಕರಿಗೊಪ್ಪಿಸಿ:
ಇನ್ನು ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸ್ಥಳೀಯರು ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸಬೇಡಿ ಬದಲಾಗಿ ಸಾರ್ವಜನಿಕ ಕೈಗೊಪ್ಪಿಸಿ ನಾವೇ ಆತನಿಗೆ ತಕ್ಕ ಶಿಕ್ಷೆ ನೀಡುತ್ತೇವೆ. ದೇಶದ ಕಾನೂನಿನಲ್ಲೂ ಬದಲಾವಣೆ ತನ್ನಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರೋಪಿಯನ್ನು ಸ್ಥಳದಲ್ಲೇ ಎನ್ ಕೌಂಟರ್ ಮಾಡುವಂತೆಯೂ ಆಗ್ರಹಗಳು ಕೇಳಿಬರುತ್ತಿದೆ.