ಉಡುಪಿ, ನ.23 (DaijiworldNews/HR): ಮಣಿಪಾಲದ ಸಿಟಿಯಲ್ಲಿ ರಾತ್ರಿ ಸಮಯದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ, ಹೆಣ್ಣು ಮಕ್ಕಳ ರಕ್ಷಣೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಸನ್ ಸೆಟ್ ಆಪರೇಷನ್ ಎನ್ನುವ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ. ಉಡುಪಿ ನಗರ ಭಾಗದ ಪೊಲೀಸ್ ಠಾಣೆಗಳ ಪಿಎಸ್ಐಗಳನ್ನು ಒಳಗೊಂಡ ಒಂದು ವಿಶೇಷ ತಂಡ ರಾತ್ರಿ ಪಾಳಯದಲ್ಲಿ ಸಂಜೆ ಏಳರಿಂದ ರಾತ್ರಿ 11 ಗಂಟೆವರೆಗೆ ಈ ತಂಡ ವಿಶೇಷ ಗಸ್ತು ನಡೆಸಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ತಿಳಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿಯ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ತಿಂಗಳ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳನ್ನು ಬೇಧಿಸುವಲ್ಲಿ ಪತ್ರಕರ್ತರು ನೀಡಿದ ಮಾಹಿತಿಗಳು ಪೊಲೀಸ್ ಇಲಾಖೆಗೆ ಬಹಳಷ್ಟು ಸಹಕಾರಿ ಯಾಗಿದೆ. ಇದೇ ರೀತಿಯ ಪೊಲೀಸರಿಗೆ ಸಹಕಾರ ನೀಡುವ ಕಾರ್ಯ ಮುಂದು ವರೆಯಬೇಕು. ಪೊಲೀಸರು ಮತ್ತು ಪತ್ರಕರ್ತರು ಒಟ್ಟಿಗೆ ಕೆಲಸ ಮಾಡುವ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರುವಂತಾಗಬೇಕು" ಎಂದರು.
ಇದೇ ಸಂದರ್ಭದಲ್ಲಿ, ಎಸ್ಪಿ ವಿಷ್ಣುವರ್ಧನ್ ಪತ್ರಕರ್ತರ ಸಂಘದ ಸದಸ್ಯರ ವಾಹನಗಳಿಗೆ ಮಿಡಿಯಾ ಸ್ಟಿಕ್ಕರ್ ನ್ನು ಬಿಡುಗಡೆ ಗೊಳಿಸಿ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಸುಭಾಷ್ಚಂದ್ರ ವಾಗ್ಳೆ ಮತ್ತು ಹರಿಪ್ರಸಾದ್ ನಂದಳಿಕೆ ಹಾಗೂ ಪಿ.ಆರ್.ರಾಮಯ್ಯ ಪ್ರಶಸ್ತಿ ಪುರಸ್ಕೃತ ಯು.ಎಸ್.ಶೆಣೈ ಅವರನ್ನು ಸನ್ಮಾನಿಸಲಾಯಿತು.