ಮಂಗಳೂರು, ನ. 22 (DaijiworldNews/SM): ಭಾರೀ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಗೆ ದ.ಕ. ಜಿಲ್ಲಾ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಮಂಜುನಾಥ್ ಭಂಡಾರಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ.
ದ.ಕ. ಜಿಲ್ಲೆ ಕಾಂಗ್ರೆಸ್ ಪಕ್ಷದಿಂದ ಮಂಜುನಾಥ್ ಭಂಡಾರಿ ಸ್ಪರ್ಧೆ ಖಚಿತಗೊಂಡಿದ್ದು ಈ ಕುರಿತಂತೆ ಕೆಪಿಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅವರ ಹೆಸರು ಸೇರಿಕೊಂಡಿದೆ.
ದ.ಕ. ಜಿಲ್ಲೆಯಲ್ಲಿ ಎರಡು ಸ್ಥಾನಗಳಿಗೆ ಡಿಸೆಂಬರ್ 10ರಂದು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಟಿಕೆಟ್ ಪಡೆಯಲು ದ.ಕ. ಜಿಲ್ಲೆಯಲ್ಲಿ 11 ಕಾಂಗ್ರೆಸಿಗರು ಆಕಾಂಕ್ಷಿಗಳಾಗಿದ್ದರು. ಆದರೆ ಬಹುತೇಕರು ಬಳಿಕ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದಿದ್ದರು. ಈ ನಡುವೆ ಸಹಕಾರಿ ಕ್ಷೇತ್ರದಿಂದ ರಾಜೇಂದ್ರ ಕುಮಾರ್ ಅವರ ಹೆಸರು ಕೂಡ ಕಾಂಗ್ರೆಸ್ ಅಂತಿಮ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಕೆಲವೊಂದು ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಡಾ. ರಾಜೇಂದ್ರ ಕುಮಾರ್ ಅವರು ಕೂಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಈ ನಡುವೆ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಪ್ರಭಾವಿ ನಾಯಕ ಮಂಜುನಾಥ್ ಪರ ಬ್ಯಾಟ್ ಬೀಸಿದ್ದರು. ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದರು.
ಬಳಿಕ ಅಂತಿಮ ಪಟ್ಟಿಯಲ್ಲಿ ಮಂಜುನಾಥ್ ಭಂಡಾರಿ, ಶಶಿಧರ್ ಹೆಗ್ಡೆ ಹೆಸರಿತ್ತು. ಶಶಿಧರ್ ಹೆಗ್ಡೆಗೆ ಟಿಕೆಟ್ ನೀಡುವಂತೆ ಕರಾವಳಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೊರೆ ಹೋಗಿದ್ದರು. ಶಶಿಧರ್ ಹೆಗ್ಡೆ ಪರ ಕೆಲವು ನಾಯಕರ ಒಲವು ಹೊಂದಿದ್ದರು. ದೆಹಲಿಗೆ ತೆರಳಿ ಶಶಿಧರ್ ಹೆಗ್ಡೆಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು.
ಇದೀಗ ಕಾಂಗ್ರೆಸ್ನ ಅಂತಿಮ ಪಟ್ಟಿ ಬಿಡುಗಡೆಗೊಂಡಿದ್ದು, ಮಂಜುನಾಥ್ ಅವರ ಹೆಸರು ಇದರಲ್ಲಿ ಸೇರಿಕೊಂಡಿದೆ. ಮಂಜುನಾಥ್ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ.