ಉಡುಪಿ, ನ.22 (DaijiworldNews/HR): ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇವರ ಸಹಭಾಗಿತ್ತವದಲ್ಲಿ ನೀಡಲಾಗುವ ದಿ. ಜೋಸೆಫ್ ಮತ್ತು ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರ -2021 ಕ್ಕೆ ವಿತಾಶಾ ರಿಯಾ ರೊಡ್ರಿಗಸ್ (ಮುದ್ದು ತೀರ್ಥಹಳ್ಳಿ) ಆಯ್ಕೆಯಾಗಿದ್ದಾರೆ.
ವಿತಾಶಾ ರಿಯಾ ರೊಡ್ರಿಗಸ್ ಇವರು ತಮ್ಮ ಕಾವ್ಯ ನಾಮ ಮುದ್ದು ತೀರ್ಥಹಳ್ಳಿ ಹೆಸರಿನಲ್ಲಿ ಕಳೆದ ಏಳು ವರ್ಷಗಳಿಂದ ಕೊಂಕಣಿ ಹಾಗೂ ಕನ್ನಡ ಪತ್ರಿಕೆಗಳಲ್ಲಿ ಕಥೆ, ಕವನಗಳು ಮತ್ತು ಲೇಖನಗಳನ್ನು ಬರೆಯುತ್ತಿದ್ದು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.
ಮುದ್ದು ತೀರ್ಥಹಳ್ಳಿ ಇವರು ಈಗಾಗಲೇ 6 ಪುಸ್ತಕಗಳನ್ನು ಪ್ರಕಟಿಸಿದ್ದು ಹೂ ಗೊಂಚಲು (ಕವಿತೆ ಮತ್ತು ಕಥೆಗಳು – 2006), ಕಾನನ ಕಲರವ (ಕವಿತೆಗಳು – 2008), ಎಷ್ಟು ಬಣ್ಣದ ಇರುಳು (ಕವಿತೆಗಳು -2010), ಒಂದು ಚಂದ್ರನ ತುಂಡು (ಲಲಿತ ಪ್ರಬಂಧ – 2011), ಕಾಡ ಹಾದಿಯ ಹೂಗಳೂ (ಕಾದಂಬರಿ – 2013), ಕ್ಷಮಿಸಲಾಗುವುದಿಲ್ಲ ಕ್ಷಮಿಸಿ ( ಕವಿತೆಗಳು – 2018) ಇವರ ಕಾಡ ಹಾದಿಯ ಹೂಗಳು ಕಾದಂಬರಿ ಚಲನಚಿತ್ರವಾಗಿ ನಿರ್ಮಾಣವಾಗಿದೆ.
ಇವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಕರಿಯಣ್ಣ ದತ್ತಿ ಪುರಸ್ಕಾರ, ಶಾರದಾ ಆರ್ ರಾವ್ ದತ್ತಿ ಪುರಸ್ಕಾರ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರ ಪ್ರತಿಷ್ಠಾನದ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಅರಳು ಮೊಗ್ಗು ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ವಿದ್ಯಾಸಾಗರ ಬಾಲ ಪುರಸ್ಕಾರ, ಅಡ್ವೈಸರ್ ಪ್ರಶಸ್ತಿ, ಕೇರಳ-ಕಾಸರಗೋಡು ಸಾಂಸ್ಕೃತಿ ಪ್ರಶಸ್ತಿ, ಶಿವಮೊಗ್ಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಸಾಧಾರಣ ಪ್ರತಿಭೆ ಪುರಸ್ಕಾರ, 2012 ರಲ್ಲಿ ಕನ್ನಡ ಪ್ರಭ ಪತ್ರಿಕೆಯ ರಾಜ್ಯ ಹಂತದ ಮಕ್ಕಳ ಕವಿತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
2010 ರಲ್ಲಿ ರಾಜ್ಯ ಮಟ್ಟದ ಮಟ್ಟದ ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇವರಿಗೆ ದಿ. ಜೋಸೆಫ್ ಮತ್ತು ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರವನ್ನು ಡಿಸೆಂಬರ್ 5 ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಕಥೊಲಿಕ್ ಸಭಾ ಹಾಗೂ ಅಮ್ಚೋ ಸಂದೇಶ್ ಮಾಸಿಕ ಪತ್ರಿಕೆ ಆಯೋಜಿಸಿರುವ ಲೇಖಕರ ಸಮಾವೇಶದಲ್ಲಿ ನೀಡಲಾಗುವುದು ಎಂದು ಪುರಸ್ಕಾರ ಸಮಿತಿಯ ಸಂಯೋಜಕರಾಗಿರುವ ಡಾ. ಜೆರಾಲ್ಡ್ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.