ಉಡುಪಿ, ನ 22 (DaijiworldNews/MS): ವೀಸಾ ಮಾಡಿಸಿ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಹಣ ಪಡೆದು ವ್ಯಕ್ತಿಯೋರ್ವ ವಂಚಿಸಿದ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಾದ ಉದ್ಯಾವರ ಜನತಾ ಕಾಲೋನಿ ಸುನೀಲ್(27) ಎಂಬವರು ದೂರು ನೀಡಿದ್ದು, ಸುನೀಲ್ ಹಾಗೂ ಅವರ ಸ್ನೇಹಿತ ಅವಿನಾಶ್ಎಂಬುವವರಿಗೆ ಆಪಾದಿತ ಕರುಣಾಕರ ಎಂಬುವವರು ವೀಸಾ ಮಾಡಿಸಿ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 2018ರ ಅಕ್ಟೋಬರ್ 18 ರಂದು ಮೂಡನಿಡಂಬೂರು ಗ್ರಾಮದ ರಾಮಕೃಷ್ಣ ಲಾಡ್ಜ್ ನ ರೂಮಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದ.
ಆ ಬಳಿಕ ಸುನೀಲ್ ಅವರಿಂದ 45,000 ರೂ. ಹಾಗೂ ಅವಿನಾಶ್ ಅವರಿಂದ 60,000 ರೂ ಹಣವನ್ನು ಪಡೆದು, ಈವರೆಗೆ ಯಾವುದೇ ಕೆಲಸವನ್ನು ಮಾಡಿಸಿ ಕೊಡದೆ, ಹಣವನ್ನೂ ಸಹ ವಾಪಾಸು ಕೊಡದೆ ಮೋಸ ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆ ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿರುತ್ತದೆ.