ಮಂಗಳೂರು, ನ.22 (DaijiworldNews/HR): ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯು.ಟಿ.ಖಾದರ್ ಅವರ ಸ್ವಕ್ಷೇತ್ರದಲ್ಲಿಯೇ ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಮುಖಂಡರಿಗೆ ಕೊಲೆ ಮಾಡುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಅವರು ಕಾಂಗ್ರೆಸ್ನವರನ್ನು ಆಸ್ಪತ್ರೆ ಅಥವಾ ಸ್ಮಶಾನಕ್ಕೆ ಕಳುಹಿಸುವುದು ಗೊತ್ತು ಎಂದು ಉಳ್ಳಾಲದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ನೇರವಾಗಿ ಬೆದರಿಕೆ ಹಾಕಿರುವ ಎಸ್ಡಿಪಿಐ ಮುಖಂಡನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಬೂಬಕ್ಕರ್ ಕುಳಾಯಿ ಮಾತನಾಡಿ, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಎಸ್ಡಿಪಿಐ ನಾಯಕರ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಹತಾಶರಾಗಿ ಹೋಗಿರುವುದನ್ನು ಗಮನಿಸುತ್ತಿದ್ದೇನೆ. ಎಸ್ಡಿಪಿಐ ಬೆಳವಣಿಗೆಯನ್ನು ಕಾಂಗ್ರೆಸ್ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ಕೆಲವು ಗೂಂಡಾಗಳ ಮೂಲಕ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ನಾವು ತಲೆ ತಗ್ಗಿಸಿಕೊಂಡಿದ್ದೆವು. ಆದರೆ ನಮ್ಮಲ್ಲಿ ನಮ್ಮ ಬಳಿ ಎರಡು 'ಎಂ' ಇದೆ ಅದರಲ್ಲಿ ಒಂದು ಮ್ಯಾನ್ಪವರ್, ಮತ್ತೊಂದು ಮಸಲ್ಪವರ್ ಎಸ್ಡಿಪಿಐ ಕಾರ್ಯಕರ್ತರನ್ನು ಮುಟ್ಟಿದ್ರೆ ನಮ್ಮ ಒಂದು ಎಂ ಬಳಕೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ತಮ್ಮ ಪಕ್ಷದ ಕಾರ್ಯಕರ್ತರು ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಒಳಗಾಗುವುದಿಲ್ಲ. ಆದರೆ ಜನರನ್ನು ಆಸ್ಪತ್ರೆಗಳಿಗೆ ಅಥವಾ ಸ್ಮಶಾನಕ್ಕೆ ಹೇಗೆ ಕಳುಹಿಸಬೇಕೆಂದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.