ಪುತ್ತೂರು , ನ.22 (DaijiworldNews/PY): ವಿವಾಹ ನಿಶ್ಚಿತಾರ್ಥ ನಿಶ್ಚಯವಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ.
ಮೃತ ಯುವಕನನ್ನು ಸುಳ್ಯಪದವು ಶಬರಿನಗರ ನಿವಾಸಿ ಕೂಸಪ್ಪ ಪೂಜಾರಿ ಅವರ ಪುತ್ರ ರವಿರಾಜ್ (31) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ರವಿರಾಜ್ ಅವರಿಗೆ ನ.25ಕ್ಕೆ ವಿವಾಹ ನಿಶ್ಚಿತಾರ್ಥ ದಿನ ನಿಗದಿಯಾಗಿತ್ತು. ಈ ಹಿನ್ನೆಲೆ ಅವರು ನ.19ರಂದು ಪುತ್ತೂರಿನಲ್ಲಿರುವ ಸ್ನೇಹಿತನ ಮನೆಗೆ ಹೋಗಿ ನ.21ರಂದು ಸಂಜೆ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು.
ರವಿರಾಜ್ ಅವರನ್ನು ವಿವಾಹವಾಗಲೆಂದು ನ.21ರಂದು ಕುಂದಾಪುರದಿಂದ ಬೇರೊಂದು ಹುಡುಗಿಯ ದಿಬ್ಬಣ ದಿಢೀರ್ ಬಂದಾಗ ಆತಂಕಕ್ಕೊಳಗಾದ ಮನೆಯವರು ರವಿರಾಜ್ ಅವರನ್ನು ಹುಡುಕಾಡಿದ್ದಾರೆ. ಆದರೆ, ಆ ವೇಳೆ ರವಿರಾಜ್ ಮನೆಯಲ್ಲಿರಲಿಲ್ಲ. ಇದರಿಂತ ಆತಂಕಗೊಂಡ ಮನೆಯವರು ಹುಡುಕಾಟ ಮುಂದುವರಿಸಿದ್ದಾರೆ.
ನೆಟ್ಟಣಿಗೆ ಮುಡ್ನೂರುಗ್ರಾಮದ ಈಶ್ವರಮಂಗಲ ಕರೆಂಟಿಯಡ್ಕದಲ್ಲಿ ವಿದೇಶದಲ್ಲಿರುವ ರವಿರಾಜ್ ಅವರ ಸಹೋದರನ ಇನ್ನೂ ಗೃಹಪ್ರವೇಶವಾಗದ ಹೊಸ ಮನೆಯ ಬಚ್ಚಲು ಕೋಣೆಯಲ್ಲಿ ರವಿರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಈಶ್ವರಮಂಗಲ ಹೊರಠಾಣೆಯ ಎಎಸ್ಐ ಜಗನ್ನಾಚಾರ್ಯ ಅವರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ರವಿರಾಜ್ ಅವರ ತಂದೆ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.