ಬಂಟ್ವಾಳ, ನ. 21 (DaijiworldNews/SM): ತಾಲೂಕಿನ ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪಾವಿತ್ರ್ಯತೆ ಉಳಿಸುವಂತೆ, ಪರಿಸರದಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ, ದೇವಸ್ಥಾನಕ್ಕೆ ಅನ್ಯ ಮತೀಯರ ಪ್ರವೇಶ ನಿರ್ಬಂಧಿಸುವಂತೆ ಆಗ್ರಹಿಸಿ ಬಂಟ್ವಾಳ ತಾ.ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಸಭೆ ಕಾರಿಂಜ ದೇವಸ್ಥಾನದ ರಥಬೀದಿಯಲ್ಲಿ ರವಿವಾರ ನಡೆಯಿತು.
ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಪುತ್ತೂರು ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ, ದೇವಸ್ಥಾನದ ಪರಿಸರವನ್ನು ಧಾರ್ಮಿಕ ವಲಯವನ್ನಾಗಿ ಘೋಷಿಸಬೇಕು. ಭಕ್ತರ ಅನುಕೂಲತೆಗಾಗಿ ಮುಂದಿನ ಶಿವರಾತ್ರಿಗೆ ಶಿವಮಾಲೆ ಧಾರಣೆ ನಡೆಸಿ ಎಲ್ಲೆಡೆಯಿಂದ ಭಕ್ತರಿಗೆ ಬರಲು ಅನುವು ಮಾಡಿಕೊಡಬೇಕು. ದೇವಸ್ಥಾನಕ್ಕೆ ಅನ್ಯಧರ್ಮೀಯರ ಪ್ರವೇಶ ನಿಷೇಧಿಸಬೇಕು. ಪ್ರವಾಸೋದ್ಯಮ ದ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯತೆ ಕೆಡಿಸಬಾರದು ಎಂದು ಹೇಳಿದರು.
ದೇವಸ್ಥಾನ ದ ಪರಿಸರದಲ್ಲಿ ನಡೆಯುವ ಗಣಿಗಾರಿಕೆಯನ್ನು ಜಿಲ್ಲಾಡಳಿತ ತಕ್ಷಣ ನಿಲ್ಲಿಸಬೇಕು. ಗೋಮಾಳ ಪ್ರದೇಶವನ್ನು ದೇವಸ್ಥಾನದ ಸುಪರ್ದಿಗೆ ಬಿಟ್ಟು ಕೊಡಬೇಕು ಎಂದ ಅವರು, ಡಿಸೆಂಬರ್ 21 ರ ಮುಂಚಿತವಾಗಿ ಕ್ರಮ ಕೈಗೊಳ್ಳಲು ಅಸಾಧ್ಯವಾದಲ್ಲಿ ದ.ಕ.ಮತ್ತು ಉಡುಪಿ ಜಿಲ್ಲೆಯ ಸಾವಿರಾರು ಕಾರ್ಯಕರ್ತರ ಸೇರುವಿಕೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಬಂಟ್ವಾಳ ಘಟಕದ ಕಾರ್ಯದರ್ಶಿ ಪದ್ಮನಾಭ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಗ್ಗ ಜಂಕ್ಷನ್ನಿಂದ ದೇವಸ್ಥಾನದವರೆಗೆ ಕಾಲ್ನಡಿಗೆಯ ಶೋಭಾಯಾತ್ರೆ ನಡೆಯಿತು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರ ವಾಹನ ರ್ಯಾಲಿ ವಗ್ಗ ಜಂಕ್ಷನ್ನಲ್ಲಿ ಸಮಾವೇಶಗೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಕಾರಿಂಜ ದೇವಸ್ಥಾನದ ಗ್ರಾಮಾಣಿ ವೆಂಕಟರಮಣ ಮುಚ್ಚಿನ್ನಾಯ, ಹಾಗೂ ಪ್ರಮುಖರು ತೆಂಗಿನಕಾಯಿ ಒಡೆದು ಪಾದಯಾತ್ರೆಗೆ ಚಾಲನೆ ನೀಡಿದರು. ಹಿಂಜಾವೇ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ, ಹಿಂಜಾವೇ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಹಿಂಜಾವೇ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಮತ್ತು ಸದಸ್ಯರು, ಕಾವಳಮೂಡೂರು ಗ್ರಾ.ಪಂ.ಉಪಾಧ್ಯಕ್ಷ ಅಜಿತ್ ಶೆಟ್ಟಿ, ಜಿಲ್ಲಾ, ತಾಲೂಕು ಘಟಕಗಳ ಪ್ರಮುಖರು, ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.