ಬಂಟ್ವಾಳ, ನ.21 (DaijiworldNews/HR): ಮೆಲ್ಕಾರ್ ಬಳಿಯ ಹೆದ್ದಾರಿ ಬದಿಯಲ್ಲಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೆಹಂದಿ ಕಾರ್ಯಕ್ರಮವೊಂದರಲ್ಲಿ ಸಂತೋಷ್ ಎಂಬಾತ ಅವಿನಾಶ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಎರಡು ಗ್ಯಾಂಗ್ಗಳು ಜಗಳವಾಡುವುದಕ್ಕಾಗಿ ಮೆಲ್ಕಾರ್ನಲ್ಲಿ ಒಂದಾಗಿದ್ದು, ಮಾತಿನ ಘರ್ಷಣೆಗಳ ಬಳಿಕ ಎರಡು ಗ್ಯಾಂಗ್ಗಳು ದೊಣ್ಣೆ ಮತ್ತು ಸೋಡಾ ಬಾಟಲಿಗಳಲ್ಲಿ ಹೊಡೆದುಕೊಂಡು ಜಗಳವಾಡಿದ್ದಾರೆ.
ಪಾಣೆಮಂಗಳೂರು ವೆಂಕಟರಮಣ ದೇವಸ್ಥಾನದ ಉತ್ಸವದ ನಿಮಿತ್ತ ಭದ್ರತಾ ಕರ್ತವ್ಯದಲ್ಲಿದ್ದ ಬಂಟ್ವಾಳ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಲೈಮಾರ್ ಎಂಬುವರಿಗೆ ಈ ವಿಚಾರ ತಿಳಿದು,ಕೆಲ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಮೆಲ್ಕಾರ್ನ ಸಾರಾ ಆರ್ಕೇಡ್ಗೆ ತಲುಪಿದಾಗ, ಒಂಬತ್ತರಿಂದ ಹತ್ತು ಅಪರಿಚಿತರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಪೊಲೀಸರು ನೋಡಿದ್ದಾರೆ.
ಇನ್ನು ಪೋಲೀಸ್ ಜೀಪು ನೋಡಿದ ತಕ್ಷದ ಗುಂಪು ಅಲ್ಲಿಂದ ಚದುರಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.