ಮಂಗಳೂರು, ನ.20 (DaijiworldNews/HR): ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾಗಿರುವ ಡಾ. ವೆಂಕಟೇಶ್ ಎಮ್.ವಿ, ಅವರು ತಿಳಿಸಿದರು.
ಶನಿವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷದವರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ವಿವಿಧ ರಾಜಕೀಯ ಪಕ್ಷಗಳು ನೇಮಕಮ್ಮಾಡಿರುವ ಬಿಎಲ್ಎ ಗಳ ಪಟ್ಟಿಯನ್ನು ಸಂಬಂಧಪಟ್ಟ ಎಇಆರ್ ಒ ಗಳಿಗೆ ನೀಡಬೇಕು ಎಂದವರು ಹೇಳಿದರು.
ವಿದ್ಯಾರ್ಥಿ ನಿಲಯದಲ್ಲಿರುವ 18 ವರ್ಷ ಮೇಲ್ಪಟ್ಟವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಬಗ್ಗೆ ರಾಜಕೀಯ ಪಕ್ಷದವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಮರಣ ಹೊಂದಿರುವ ಹೆಸರುಗಳು ಮತದಾರರ ಪಟ್ಟಿಯಲ್ಲಿದ್ದರೆ ಆ ಹೆಸರುಗಳನ್ನು ತೆಗೆದು ಹಾಕಬೇಕು, ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಸದ್ಯಸರ ಹೆಸರುಗಳು ಒಂದೇ ಕಡೆ ಬರುವಂತೆ ನೋಡಿಕೊಳ್ಳ ಬೇಕು, ಈ ಬಗ್ಗೆ ಏನಾದರು ಸಮಸ್ಯೆಗಳಿದ್ದರೆ ಮತಗಟ್ಟೆ ಅಧಿಕಾರಿಗಳು ರಾಜಕೀಯ ಪಕ್ಷದಿಂದ ನೇಮಕವಾಗಿರುವ ಬಿ.ಎಲ್.ಎ ಗಳ ಸಮನ್ವಯದೊಂದಿಗೆ ಇದನ್ನು ಸರಿಪಡಿಕೊಳ್ಳುವಂತೆ ಅವರು ಸೂಚಿಸಿದರು.
ಪಿವಿಸಿ ಎಪಿಕ್ ಕಾರ್ಡ್ ಮುದ್ರಿಸಿರುವ ಅಕ್ಷರಗಳ ಗಾತ್ರವು ಸಣ್ಣದಾಗಿರುವ ಬಗ್ಗೆ ರಾಜಕೀಯ ಪಕ್ಷದವರು ತಿಳಿಸಿದಾಗ, ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾಗಿರುವ ಡಾ. ವೆಂಕಟೇಶ್ ಎಮ್ ವಿ, ಅವರ ದೂರವಾಣಿ ಸಂಖ್ಯೆ - 9880640449 ಗೆ ಸಂದೇಶವನ್ನು ಕಳುಹಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅಪರ ಜಿಲ್ಲಾಧಿಕಾರಿ ಮಾಣಿಕ್ಯ, ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿದ್ದರು.