ಕಾಸರಗೋಡು, ನ.20 (DaijiworldNews/PY): "ಕಣ್ಣೂರು ವಿಶ್ವವಿದ್ಯಾನಿಲಯದ ಮಂಜೇಶ್ವರ ಕ್ಯಾಂಪಸ್ನಲ್ಲಿ ಮುಂದಿನ ವರ್ಷದಿಂದ ಎಲ್ಎಲ್ಬಿ ಕೋರ್ಸ್ ಆರಂಭಿಸಲಾಗುವುದು. ಇದು ಕಾಸರಗೋಡು ಜಿಲ್ಲೆಯ ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ಲಭಿಸಲಿದೆ" ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಅವರು ಶನಿವಾರ ಮಂಜೇಶ್ವರದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದ ಎಂಟನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
"ಎಲ್ಎಲ್ಬಿ ಕೋರ್ಸ್ ಆರಂಭಕ್ಕೆ ಈ ವರ್ಷದಿಂದಲೇ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಮಂಜೇಶ್ವರ ಕ್ಯಾಂಪಸ್ ಭಾಷಾ ವೈವಿಧ್ಯ ಅಧ್ಯಯನ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುವುದು. ಸಪ್ತಭಾಷಾ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಭೂಮಿಯಾದ ಕಾಸರಗೋಡಿನಲ್ಲಿ ಮಲಯಾಳ ಅಲ್ಲದೆ ತುಳು, ಕನ್ನಡ ಬ್ಯಾರಿ, ಮರಾಠಿ, ಕೊಂಕಣಿ, ಉರ್ದು ಭಾಷಿಗರು ಇದ್ದಾರೆ. ರಾಷ್ಟಕವಿ ಮಂಜೇಶ್ವರ ಗೋವಿಂದ ಪೈ, ಪಿ. ಕುಞರಾಮನ್ ನಾಯರ್, ಮಹಾಕವಿ ಕುಟ್ಟಮತ್, ಕಯ್ಯಾರ ಕಿಞ್ಚ ಣ್ಣ ರೈ, ವಿದ್ವಾನ್ ಪಿ. ಕೇಳು ನಾಯರ್, ಟಿ. ಉಬೈದ್ ಹೀಗೆ ಹತ್ತು ಹಲವು ದಿಗ್ಗಜರ ನಾಡಾಗಿದೆ. ಜಿಲ್ಲೆಯ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ" ಎಂದರು.
"ಹೊಸ ವೈದ್ಯಕೀಯ ಕಾಲೇಜು ಆರಂಭಿಸಿರುವುದು 15 ಕುಟುಂಬ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. 244 ಶಾಲೆಗಳನ್ನು ಹೈಟೆಕ್ ಆಗಿ ಮೇಲ್ದರ್ಜೆಗೇರಿಸಿರುವುದು ಜಿಲ್ಲೆಯ ಶಿಕ್ಷಣ ಇಲಾಖೆಗೆ ಹೊಸ ರೂಪು ನೀಡಿದೆ" ಎಂದು ಮುಖ್ಯಮಂತ್ರಿ ಹೇಳಿದರು.
ಉನ್ನತ ಶಿಕ್ಷಣ ಸಚಿವ ಆರ್.ಬಿಂದು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಕೆ. ಎಂ ಅಶ್ರಫ್ ಶಿಲಾಫಲಕವನ್ನು ಅನಾವರಣಗೊಳಿಸಿದರು.
ಕಣ್ಣೂರು ವಿ.ವಿ ಉಪ ಕುಲಪತಿ ಪ್ರೊ. ಗೋಪಿನಾಥ್ ರವೀಂದ್ರನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎಂ. ಸುಹೈಬ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.