ಮಂಗಳೂರು, ನ.20 (DaijiworldNews/PY): "ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ನವರ ಪಾತ್ರ ಇದೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಈ ಹಗರಣ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ. ಈ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು" ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಅವಧಿಯಲ್ಲಿ ಪ್ರಕರಣಗಳು ಸಮಗ್ರ ತನಿಖೆ ಆಗಿದೆ. ಆದರೆ, ಈಗ ಯಾವುದೇ ತನಿಖೆ ಸಮರ್ಪಕವಾಗಿ ಆಗುತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಎಂಟು ಪ್ರಕರಣಗಳು ಸಿಬಿಐ ತನಿಖೆ ಮಾಡಿಸಿದೆ" ಎಂದಿದ್ದಾರೆ.
"ಜನ್ ಧನ್, ಪಿಂಚಣಿ ಯೋಜನೆ, ಗ್ಯಾಸ್ ಸಬ್ಸಿಡಿ ಸೇರಿದಂತೆ ಕೇಂದ್ರ ಸರ್ಕಾರದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿರುವುದು ಗಂಭೀರ ವಿಚಾರವಾಗಿದೆ. ಬಿಟ್ ಕಾಯಿನ್ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಮೌನ ವಹಿಸಿದ್ದಾರೆ. ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿ ಕೆಲವು ಉನ್ನತ ನಾಯಕರ ಶಾಮೀಲು ಒಪ್ಪಿಕೊಂಡಿದ್ದಾನೆ ಹಾಗಾಗಿ ಬಿಟ್ ಕಾಯಿನ್ ಹಗರಣದ ಕುರಿತು ಸಿಟ್ಟಿಂಗ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ಹಗರಣದಲ್ಲಿ ಭಾಗಿಯಾಗಿರುವ ನಾಯಕರ ಬಗ್ಗೆ ಸತ್ಯವನ್ನು ಬಹಿರಂಗಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಬಿಜೆಪಿ ಹೇಳುವಂತೆ ಭ್ರಷ್ಟಾಚಾರ ವಿರೋಧಿ ಎಂಬುದು ಸುಳ್ಳು. ಯೋಜನೆಗಳ ಕಾಂಟ್ರಾಕ್ಟರ್ದಾರರಿಂದ ಶೇ.40ರಷ್ಟು ನೀಡುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮದು 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು" ಎಂದು ಕಿಡಿಕಾರಿದ್ಧಾರೆ.
"ಬಿಟ್ ಕಾಯಿನ್ ಹಗರಣದ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ನಮ್ಮ ಜಿಲ್ಲೆಯ ರಾಜಕಾರಣಿಗಳು ಈ ಹಗರಣದಲ್ಲಿ ಇದ್ದಾರಾ ಎನ್ನುವ ಬಗ್ಗೆ ತನಿಖೆ ಮಾಡಲಿ. ಜನರಿಗೆ ನೈಜತೆಯನ್ನು ಬಿತ್ತರಿಸಲಿ. ತನಿಖೆಯ ಸಂದರ್ಭ ಅಧಿಕಾರದಿಂದ ಕೆಳಗಿಳಿದು ತನಿಖೆಗೆ ಹಾಜರಾದರೆ ಒಳಿತು" ಎಂದಿದ್ದಾರೆ.