ಮಲ್ಪೆ, ನ 20 (DaijiworldNews/MS): ಮೀನುಗಾರರ ಬದುಕು ಸಾಹಸಮಯ. ಅಪಾಯ ಎಂದೂ ಕಟ್ಟಿಟ್ಟ ಬುತ್ತಿ. ಈ ನಡುವೆ ಮಲ್ಪೆ ದಕ್ಕೆಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದು ಜೀವ ಕಳೆದುಕೊಳ್ಳುವ ವರ ಸಂಖ್ಯೆ ಹೆಚ್ಚಾಗುತ್ತಿದೆ. ಎಷ್ಟೋ ಬಾರಿ ಕಳೆದುಹೋದ ಎರಡು ಮೂರು ದಿನದ ನಂತರ ಕೊಳೆತ ದೇಹ ಸಿಕ್ಕಿದ್ದೂ ಇದೆ. ಇದಕ್ಕೆಲ್ಲ ಪ್ರಮುಖ ಕಾರಣ ದಕ್ಕೆಯಲ್ಲಿ ಹೂಳು ತುಂಬಿರುವುದು. ಕಳೆದ ಮೂರು ವರ್ಷಗಳಿಂದ ದಕ್ಕೆಯಲ್ಲಿ ಹೂಳೆತ್ತುವ ಕೆಲಸವೇ ನಡೆಯದೇ ಮೀನುಗಾರರ ಪ್ರಾಣಕ್ಕೆ ಸಂಚಕಾರವಾಗಿದೆ.
ದಕ್ಕೆಯಲ್ಲಿ ನೂರಾರು ದೋಣಿಗಳಿದ್ದು ಮಲ್ಪೆಯವರಲ್ಲದೆ, ಬೇರೆ ರಾಜ್ಯದಿಂದ ಬಂದಂತಹ ಬೋಟುಗಳು ಇಲ್ಲಿ ಮೊಕ್ಕಾಂ ಹೂಡುತ್ತವೆ. ಹಾಗಾಗಿ ಕೆಲವೊಮ್ಮೆ ಇಲ್ಲಿ ದುರಂತದಲ್ಲಿ ಸಾವನ್ನಪ್ಪಿದವರ ವಿಳಾಸ ಗುರುತು ಪತ್ತೆಯಾಗುವುದಿಲ್ಲ.
ಮಲ್ಪೆಯ ದಕ್ಕೆ ಸುಮಾರು 25 ರಿಂದ 30 ಅಡಿ ಆಳ ಇದ್ದು, ದಕ್ಕೆಯಲ್ಲಿ ತುಂಬಿರುವ ನೀರು ಕಲುಷಿತ ವಾಗಿ ವಿಷಪೂರಿತ ವಾಗಿದೆ. ಕೆಲವೊಮ್ಮೆ ಈಜು ತಿಳಿದವರೂ ಕೂಡ ಜೀವ ರಕ್ಷಣೆಗಾಗಿ ಈ ನೀರಿಗೆ ಇಳಿಯದಂತಹ ಪರಿಸ್ಥಿತಿ ಎದುರಾಗಿದೆ.ನೀರು ಕಮ್ಮಿ ಇದ್ದರೆ ಬೋಟಿನ ಫ್ಯಾನಿಗೆ, ಬಲೆ, ರೋಪ್ ಟಯರ್ -ಇತ್ಯಾದಿ ಸಿಕ್ಕಿ ಬೀಳುವ ಸಂಭವವಿದೆ. ಇನ್ನೂ ಐದರಿಂದ 7ಅಡಿ ಹೂಳು ತೆಗೆದರೆ ಜೀವರಕ್ಷಣೆಯನ್ನಾದರೂ ಮಾಡಬಹುದು ಎಂದುಮೀನುಗಾರರ ಅಂಬೋಣ
ಒಮ್ಮೆ ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಆತ ಐದು ಅಡಿ ಕೆಳಗೆ ಹೋಗಿ ಮೇಲೆ ಬರುವಾಗ ಆತ ಪ್ರಾಣವನ್ನೇ ಕಳೆದುಕೊಂಡಿರುತ್ತಾ ಯಾರಾದರೂ ಕೆಳಗೆ ಬಿದ್ದರೆ ಪಕ್ಕದಲ್ಲೇ ಇರುವ ಅಗ್ನಿಶಾಮಕದಳದವರು ಧಾವಿಸುವಾಗ ಕೆಲವೊಮ್ಮೆ ಜೀವ ರಕ್ಷಣೆ ಮಾಡುವುದು ಅಸಾಧ್ಯ ವಾಗುತ್ತದೆ. ಹಾಗಿದ್ದಾಗ ಮಲ್ಪೆಯ ಜೀವರಕ್ಷನಾಗಿರುವ ಈಶ್ವರ್ ಮಲ್ಪೆ ಬಿಟ್ಟರೆ ಈ ಭಾಗದಲ್ಲಿ ನುರಿತ ಮುಳುಗು ತಜ್ಞರ ತಂಡ ಯಾವುದೂ ಇಲ್ಲ. ಇದರ ಅವಶ್ಯಕತೆ ಬಗ್ಗೆ ಯಾವ ನಾಯಕರೂ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ.
ಮೃತದೇಹ ಇಲ್ಲದಿದ್ದರೆ ಹತ್ತು ವರುಷ ಇನ್ಸುರೆನ್ಸ್ ಇಲ್ಲ
ನೀರಿನ ಆಳದಲ್ಲಿ ಮುಳುಗಿ ಮೃತದೇಹ ತೆಗೆದುಕೊಡುವುದು ಬೋಟಿನ ನಡುವೆ ತುಂಬಾ ಕಷ್ಟದ ಸನ್ನಿವೇಶ. ಕುಟುಂಬಸ್ಥರಿಗೆ ಮೃತದೇಹ ಸಿಗದಿದ್ದರೆ ಹತ್ತು ವರುಷ ಇನ್ಸುರೆನ್ಸ್ ಸಿಗದ ಪರಿಸ್ಥಿತಿ. ಮೃತದೇಹ ಪತ್ತೆಯಾಗದೆ ಇದ್ದರೆ ಮಿಸ್ಸಿಂಗ್ ಕೇಸ್ ಅಂತ ಕೇಸ್ ರಿಜಿಸ್ಟರ್ ಮಾಡ್ತಾರೆ. ಹೀಗಾಗಿ ನೀರಲ್ಲಿ ಮುಳುಗಿದವರ ಪ್ರಾಣ ರಕ್ಷಣೆಗೆ ಅಥವಾ ಮೃತದೇಹವನ್ನಾದರೂ ಹೊರತೆಗೆಯಲು ಯತ್ನಿಸುತ್ತಾರೆ ಈಶ್ವರ್ ಮಲ್ಪೆ.
"ನೀರಿನ ಆಳದಲ್ಲಿ ತುಂಬಾ ಹೂಳು ತುಂಬಿ ಹೋಗಿದ್ದು ಅದರಿಂದ ನೀರಿಗೆ ಬಿದ್ದವರು ಮೇಲೆ ಬರದೆ ಒದ್ದಾಡಿಕೊಂಡು ಪ್ರಾಣ ಬಿಡುತ್ತಾರೆ. ನೀರು ತುಂಬಾ ಇದ್ದರೆ ನೀರಿಗೆ ಬಿದ್ದ 2 - 3 ಸಲ ಮೇಲೆ ಬರುತ್ತಾನೆ ಇದರಿಂದ ಪ್ರಾಣವನ್ನು ಉಳಿಸಬಹುದು ಆದಷ್ಟು ಬೇಗ ನಮ್ಮ ಬಂದರಿನ ಒಳಗೆ ಹೂಳನ್ನು ತೆಗೆಯಬೇಕು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.ಈ ಕೊಳಕು ಕೆಸರು ಮಣ್ಣು ಮಿಶ್ರಿತ ನೀರಿನಲ್ಲಿ ಜೀವದ ಹಂಗುತೊರೆದ ಕೆಲಸ ನಿರ್ವಹಿಸುತ್ತೇನೆ ಕೆಳಗೆ ಹೋದರೆ ಕಣ್ಣಿಗೆ ಏನೂ ತೋರದೆ ಹುಡುಕುವಾಗ ನೀರಿನ ಆಳದಲ್ಲಿ ಫೈಬರ್ ಪೀಸ್ ಗ್ಲಾಸ್ ಪೀಸ್ ಟಯರ್ ಬಲೆ ಕಬ್ಬಿಣದ ರಾಡ್ ಹಾಗೂ ತಲೆಗೆ ಬೋಟ್ ತುಂಬಾ ಸಲ ತಾಗುತ್ತದೆ. ಇನ್ನಿತರ ಅಡತಡೆ ಇದ್ದ ಇದ್ದರೂ ಅವರ ಮನೆಗೆ ಮೃತದೇಹವನ್ನು ತೆಗೆದುಕೊಡುತ್ತೇನೆ . ಅವನ ಪ್ರಾಣ ಉಳಿಸಲಾಗದಿದ್ದರೂ ಮೃತದೇಹ ತೆಗೆದು ಕೊಟ್ಟೆ ಅನ್ನುವ ತೃಪ್ತಿ ಅಷ್ಟೆ" ಎನ್ನುತ್ತಾರೆ ಈಶ್ವರ್ ಮಲ್ಪೆ.