ಉಡುಪಿ, ನ 20 (DaijiworldNews/MS): ಕುಂದಾಪುರ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು 30 ಕೋ.ರೂ.ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಕೋಟೇಶ್ವರ-ಸೋಮೇಶ್ವರ ಜಿಲ್ಲಾ ಮುಖ್ಯ ರಸ್ತೆಯ ಹೊಂಬಾಡಿಯಿಂದ ಹಾಲಾಡಿವರೆಗೆ ಭೂಸ್ವಾಧೀನ ಸೇರಿದಂತೆ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗೆ 15 ಕೋ.ರೂ. ಹಾಗೂ ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯ ಬಾರ್ಕೂರು ಪೇಟೆಯಿಂದ ಹಳ್ಳಾಡಿವರೆಗೆ ಭೂಸ್ವಾಧೀನ ಸೇರಿದಂತೆ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗೊಳಿಸಲು 15 ಕೋ.ರೂ.ಅಗತ್ಯವಿದೆ ಎಂದು ಈ ವೇಳೆ ತಿಳಿಸಿದ್ದಾರೆ
ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿ ಭೂಸ್ವಾಧೀನ ಮಾಡಿ ರಸ್ತೆ ಅಗಲೀಕರಣ ಮಾಡುವುದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಪಂಚಾಯತ್ ಅಧ್ಯಕ್ಷರ ನಿರ್ಣಯದ ಪ್ರಕಾರ ನಾನು ಬದ್ಧನಾಗಿ ಜನಪರ ಕೆಲಸ ಮಾಡಿದ್ದೇನೆ. ಭೂಸ್ವಾಧೀನ ಮಾಡಿಕೊಂಡು ಭೂ ಸಂತ್ರಸ್ತರಿಗೆ ಪರಿಹಾರ ಕೊಟ್ಟು ರಸ್ತೆ ವಿಸ್ತರಣೆ ಮಾಡಲಿ. ಇಲ್ಲದಿದ್ದರೆ ಜನ ಸಾಮಾನ್ಯರಿಗೆ ಕಷ್ಟ ಆಗುತ್ತದೆ ಎಂದು ಹೇಳಿದ್ದೆ. ಈ ಬಗ್ಗೆ 2013 ರಿಂದ ವಿಧಾನ ಸಭೆಯಲ್ಲಿ ಪ್ರಶ್ನಿಸುತ್ತಿದ್ದೇನೆ. ಸರಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ದೇಶದ ರೈತರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಯ ಬಗ್ಗೆ ಸಾಕಷ್ಟು ವಿಮರ್ಶೆಗೆ ಒಳಪಡಿಸಿ ಈಗ ಹಿಂದೆಗೆದುಕೊಂಡಿದೆ. ಉಳಿದಂತೆ ಕೇಂದ್ರ ಸರಕಾರದ ಈ ನಿರ್ಧಾರದ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ
ಸರಕಾರದ ಕಾಯ್ದೆ, ಕಾನೂನಿಗೆ ಕೆಲವೊಮ್ಮೆ ವಿರೋಧ, ಪರವಾಗಿ ಮಾತನಾಡುವುದು, ಅಸ್ಪಷ್ಟ ಮಾಹಿತಿಯಿಂದ ಪ್ರತಿಭಟಿಸುವುದು ಸಾಮಾನ್ಯ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ತಿಳುವಳಿಕೆ ಪಡೆದು ಕೊಂಡು ವಿಮರ್ಶೆ ನಡೆಸಿ ಕೇಂದ್ರ ಸರಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ಸದ್ಯ ಮತದಾರರು ಪಟ್ಟಣ ಪಂಚಾಯತ್, ಪುರಸಭೆ, ಗ್ರಾ.ಪಂ.ಸದಸ್ಯರು ಮಾತ್ರ ಇದ್ದಾರೆ. ಇವರೆಲ್ಲ ಪಕ್ಷದ ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದವರಲ್ಲ. ರಾಜಕೀಯ ಪಕ್ಷ ಬೆಂಬಲಿತರಾಗಿದ್ದಾರೆ. ಮತದಾರರು ಅಭಿವೃದ್ದಿ ನೋಡಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಇನ್ನು ಉಡುಪಿ ಪುರಭವನದಲ್ಲಿ ನಡೆದ ಜನ ಸ್ವರಾಜ್ ಸಮಾವೇಶದಲ್ಲಿ ನಾನು ಭಾಗವಹಿಸಿದ್ದೆ. ನಾನು ಹೊರಗಡೆ ಇದ್ದೆ. ಅಗತ್ಯವಿದ್ದರೆ ಮಾತ್ರ ನಾನು ವೇದಿಕೆಗೆ ಹೋಗುತ್ತೇನೆ. ಅಗತ್ಯವಿಲ್ಲವೆಂದರೆ ವೇದಿಕೆಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಯಾವ ಪಕ್ಷದಿಂದಲೂ ಅಭ್ಯರ್ಥಿ ಯಾರೆಂಬುದು ಇನ್ನೂ ಪ್ರಕಟವಾಗಿಲ್ಲ. ಯಾರು ಅಭ್ಯರ್ಥಿ ಎನ್ನುವುದು ಹೊರಗಡೆ ಬಾರದೇ ಸೋಲು, ಗೆಲುವಿನ ಲೆಕ್ಕಾಾಚಾರ ಹೇಳುವುದಕ್ಕೆ ಹೇಗೆ ಸಾಧ್ಯ ಎಂದು ಹೇಳಿದ್ದಾರೆ.