ಉಳ್ಳಾಲ, ನ. 19 (DaijiworldNews/SM): ಕೊರೋನಾ ಎರಡನೇ ಅಲೆಯ ಬಳಿಕ ಉಂಟಾದ ಲಾಕ್ ಡೌನ್ ನಿಂದಾಗಿ ದ.ಕ. ಹಾಗೂ ಕಾಸರಗೋಡು ನಡುವೆ ಸ್ಥಗಿತಗೊಂಡಿದ್ದ ಬಸ್ ಸಂಚಾರ ಶುಕ್ರವಾರದಂದು ಆರಂಭಗೊಳ್ಳುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿರಾಳರಾಗಿದ್ದಾರೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದ.ಕ. ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಗಡಿಭಾಗದ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಮಂಗಳೂರಿಗೆ ಕೆಲಸಕ್ಕೆ ಆಗಮಿಸುವವರೂ ಕೂಡ ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಆರಂಭಿಸುವಂತೆ ನಿರಂತರವಾಗಿ ಒತ್ತಾಯ ಕೇಳಿ ಬಂದಿತ್ತು.ಅದರಂತೆ ಬಸ್ಸು ಸಂಚಾರ ಶುಕ್ರವಾರದಿಂದ ಆರಂಭಗೊಂಡಿತು.
ಬೆಳಗ್ಗಿನ ವೇಳೆ ಕೇರಳದ ಪ್ರಯಾಣಿಕರಿಗೆ ಬಸ್ಸು ಸಂಚಾರ ಆರಂಭವಾಗುವ ಸೂಚನೆಯಿಲ್ಲದೆ ಇದ್ದ ಹಿನ್ನೆಲೆಯಲ್ಲಿ ಎಂದಿನಂತೆ ಗಡಿಭಾಗ ತಲಪಾಡಿಯಲ್ಲಿ ಇಳಿದು ಮಂಗಳೂರು ಸಿಟಿ ಬಸ್ಸುಗಳನ್ನು ಹತ್ತುವುದು ಕಂಡುಬಂದಿದೆ.
ಕರ್ನಾಟಕದ ಸಿಟಿ ಬಸ್ಸುಗಳು ಕೆಳಗಿನ ತಲಪಾಡಿಯಲ್ಲೇ ತಿರುಗುತ್ತಿತ್ತು. ಇಂದಿನಿಂದ ಸಿಟಿಬಸ್ಸುಗಳು ಮೇಲಿನ ತಲಪಾಡಿಯತ್ತ ತೆರಳಿ ಸರ್ಕಲ್ ತಿರುಗಿ ವಾಪಸ್ಸಾಯಿತು. ಕೇರಳದಿಂದ ಬರುವ ಮಂದಿ ಹೆಚ್ಚಿನವರು ಖಾಸಗಿ ವಾಹನಗಳನ್ನು ಆಶ್ರಯಿಸಿರುವುದರಿಂದ ಕೇರಳ ಹಾಗೂ ಕರ್ನಾಟಕ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಪೊಲೀಸ್ ಚೆಕ್ ಪಾಯಿಂಟ್ ಅನ್ನು ಹಿಂದಿನಂತೆ ಇಡಲಾಗಿದೆ. ಇಬ್ಬರು ಪೊಲೀಸ್ ಸಿಬ್ಬಂದಿಯೂ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಸಿ ರೋಡು- ಕಾಸರಗೋಡು ತೆರಳುವ ಕರ್ನಾಟಕ ಸಾರಿಗೆ ಬಸ್ಸುಗಳು ಕೋವಿಡ್ ನಿರ್ಭಂದದಿಂದಾಗಿ ತೊಕ್ಕೊಟ್ಟುವಿನಲ್ಲಿ ತಿರುಗುತಿತ್ತು. ಇದೀಗ ಕಾಸರಗೋಡಿಗೆ ತೆರಳುವುದರಿಂದ ಕೆಲಸಕ್ಕೆ ಬರುವ ಮಂದಿಗೆ ಸಹಕಾರಿಯಾಗಿದೆ. ಬಸ್ಸು ಸಂಚಾರದಿಂದ ತಲಪಾಡಿ ಅಂಗಡಿ ಮಾಲೀಕರಿಗೆ ವ್ಯಾಪಾರದಲ್ಲಿ ತುಸು ಚೇತರಿಕೆ ಕಂಡುಬಂದಿದೆ.