ಉಡುಪಿ, ನ.19 (DaijiworldNews/HR): ಕರ್ನಾಟಕ ರಾಜ್ಯ ಸರಕಾರವು ಜಾರಿಗೆ ತರಲಿಚ್ಛಿಸಿರುವ ಮತಾಂತರ ನಿಷೇಧ ಕಾಯ್ದೆ ಹಾಗೂ ಕ್ರೈಸ್ತ ಸಮುದಾಯದ ಚರ್ಚ್ ಗಳು ಮತ್ತು ಸಂಘ-ಸಂಸ್ಥೆಗಳ ಗಣತಿಯನ್ನು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯವು ಒಗ್ಗಟ್ಟಾಗಿ ವಿರೋಧಿಸಿದೆ. ಈ ನಿಟ್ಟಿನಲ್ಲಿ, ನವೆಂಬರ್ 19 ರಂದು ಉಡುಪಿ ಜಿಲ್ಲಾ ಕ್ರೈಸ್ತ ಸಮುದಾಯದ ಪರವಾಗಿ ಸರ್ವ ಕ್ರೈಸ್ತ ಒಕ್ಕೂಟ ಆಯೋಗದ ಸದಸ್ಯರು ಉಡುಪಿ ಜಿಲ್ಲಾಧಿಕಾರಿಗಳಿಗೆ, ಉಪ ಆಯುಕ್ತರು ಕುಂದಾಪುರ ಹಾಗೂ ಕಾರ್ಕಳ ಮತ್ತು ಕಾಪು ತಹಸೀಲ್ದಾರರಿಗೆ ಏಕಕಾಲದಲ್ಲಿ ಮನವಿಯನ್ನು ನೀಡಲಾಯಿತು.
-
ಕರ್ನಾಟಕ ಸರ್ಕಾರವು ರಾಜ್ಯದಲ್ಲಿ 'ಮತಾಂತರ ನಿಷೇಧ ಕಾಯ್ದೆ'ಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ ಎಂಬುದಾಗಿ ಆಡಳಿತ ಪಕ್ಷದ ವಿವಿಧ ನಾಯಕರುಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡುತ್ತಿವೆ. ಇದು ನಿಜವೇ ಆಗಿದ್ದರೆ, ಕರ್ನಾಟಕದ ಸಮಸ್ತ ಕ್ರೈಸ್ತ ಸಮುದಾಯವು ಒಮ್ಮನಸ್ಸಿನಿಂದ ಅಂಥಹ ಕಾಯಿದೆಯನ್ನು ವಿರೋಧಿಸುತ್ತದೆ. ಭಾರತದ ಸಂವಿಧಾನದ 25 ನೇ ಅನುಚ್ಛೇದವು ತಾನು ಇಚ್ಛಿಸಿದ ಯಾವುದೇ ಧರ್ಮವನ್ನು ಪಾಲಿಸಲು, ಆಚರಿಸಲು ಮತ್ತು ಅದನ್ನು ಪ್ರಚಾರ ಮಾಡುವ ಹಕ್ಕನ್ನು ಎಲ್ಲಾ ನಾಗರಿಕರಿಗೆ ನೀಡಿದೆ. ಹೀಗಿರುವಾಗ, ರಾಜ್ಯದಲ್ಲಿ ಜಾರಿಗೊಳಿಸಲು ಯೋಜಿಸಿರುವ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದತ್ತ ಹಕ್ಕುಗಳ ದಮನವಾಗುತ್ತದೆ. ಇದಕ್ಕೆ ಕರ್ನಾಟಕದ ಕ್ರೈಸ್ತ ಸಮುದಾಯ ಯಾವತ್ತೂ ಅವಕಾಶವನ್ನು ನೀಡುವುದಿಲ್ಲ ಹಾಗೂ ಇದನ್ನು ಬಲವಾಗಿ ವಿರೋಧಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಸಭೆಯೊಂದರಲ್ಲಿ ರಾಜ್ಯದಲ್ಲಿನ ಕ್ರೈಸ್ತ ಸಮುದಾಯದ ಚರ್ಚುಗಳ ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂದು ಆದೇಶಿಸಿದೆ. ಇದನ್ನು ಪೋಲೀಸ್ ಇಂಟೆಲಿಜೆನ್ಸ್ ವಿಭಾಗಕ್ಕೆ ವಹಿಸಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ. ಭಾರತದ ಸಂವಿಧಾನದ 15 ನೇ ಪರಿಚ್ಛೇದ ಧರ್ಮ, ಜಾತಿ, ಲಿಂಗ, ಜನ್ಮಸ್ಥಳ ಇನ್ನಿತರ ವಿಷಯಗಳ ಆಧಾರದಲ್ಲಿ ತಾರತಮ್ಯಗೊಳಿಸುವುದನ್ನು ನಿರ್ಬಂಧಿಸುತ್ತದೆ. ಹೀಗಿರುವಾಗ ಕ್ರೈಸ್ತ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿಯನ್ನು ನಡೆಸುವುದು ಸಂವಿಧಾನ-ವಿರೋಧಿ ಎಂದು ನಮ್ಮ ಅನಿಸಿಕೆ. ಹಿಂದೊಮ್ಮೆ ಜಾತಿ ಗಣತಿಯೂ ನಡೆದಿದೆ. ಅದಲ್ಲದೆ, ಚರ್ಚುಗಳ ವಿವರಗಳೆಲ್ಲವೂ ಈಗಾಗಲೇ ಸರ್ಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ನಡೆಸುವ ಅಗತ್ಯವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕ್ರೈಸ್ತ ಸಮುದಾಯವು ಸಾವಿರಾರು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಕ್ರೈಸ್ತ ಸಮುದಾಯದ ಈ ಸೇವೆಯು ಹಿಂದೆಯೂ, ಇಂದೂ ಹಾಗೂ ಮುಂದೆಯೂ ಮಾನವೀಯತೆಯ ನೆಲೆಯಲ್ಲಿ ನಿಸ್ವಾರ್ಥದಿಂದ ನಡೆಯುತ್ತಿದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇವೆ. ಒಂದೊಮ್ಮೆ ಮಾಧ್ಯಮಗಳಲ್ಲಿ ಚರ್ಚಿತ ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ, ಅದು ಸ್ಥಾಪಿತ ಹಿತಾಸಕ್ತಿಗಳ ಕೈಯಲ್ಲಿ ದುರುಪಯೋಗವಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬುದು ನಮ್ಮ ಅನಿಸಿಕೆಯಾಗಿದ್ದು ಮಾಧ್ಯಮಗಳಲ್ಲಿ ಚರ್ಚಿತ ಮತಾಂತರ ನಿಷೇಧ ಕಾಯ್ದೆಯ ಚಿಂತನೆಯನ್ನು ಹಾಗೂ ಕ್ರೈಸ್ತ ಸಮುದಾಯದ ಚರ್ಚುಗಳ ಹಾಗೂ ಧಾರ್ಮಿಕ ಸ್ಥಳಗಳ ಗಣತಿಯ ಆದೇಶವನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕ್ರೈಸ್ತ ಸಮುದಾಯದ ಪರವಾಗಿ ಮುಖ್ಯಮಂತ್ರಿಗಳಿಗೆ ಸಂಘಟನೆಯ ಪರಿವಾಗಿ ಮನವಿ ಮಾಡಿದ್ದಾರೆ.
ಈ ಆಯೋಗದಲ್ಲಿ ಉಡುಪಿ ಕಥೋಲಿಕ ಧರ್ಮಪ್ರಾಂತ, ಸಿ.ಎಸ್.ಐ. ಸಭೆ, ಸಿರೀಯನ್ ಕೆಥೊಲಿಕ್ ಸಭೆ, ಯುನೈಟೆಡ್ ಬಾಸೆಲ್ ಮಿಷನ್, ಫುಲ್ ಗೊಸ್ಪಲ್ ಚರ್ಚ್, ಸೀರೋ ಮಲಬಾರ್ ಸಭೆ, ಸೀರೋ ಮಲಂಕರ ಸಭೆ, ಕಥೋಲಿಕ ಸಭೆ, ಕರ್ನಾಟಕ ಕ್ರೈಸ್ತ ಒಕ್ಕೂಟ ಇನ್ನಿತರ ಸಭೆಗಳ ಮುಖಂಡರು ಹಾಗೂ ಕ್ರೈಸ್ತ ನಾಯಕರೂ ಸೇರಿದ್ದರು.