ಉಡುಪಿ, ನ.19 (DaijiworldNews/PY): "ನಮ್ಮ ಸರ್ಕಾರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ" ಎಂದು ಇಂಧನ ಇಲಾಖೆ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕೃಷಿ ಕಾಯ್ದೆ ಹಿಂಪಡೆತ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈಗಾಗಲೇ ಹತ್ತಾರು ರೈತ ಪ್ರತಿಭಟನೆಗಳು ನಡೆದಿವೆ. ವಿರೋಧ ಪಕ್ಷದವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಇತರರು ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ" ಎಂದಿದ್ದಾರೆ.
"ಮೂರು ಬಿಲ್ಗಳ ರೈತಪರವಾಗಿ ಇರುವ ಬಿಲ್ಗಳಾಗಿವೆ. ಕೇಂದ್ರ ಸರ್ಕಾರ ರೈತರ ಪರವಾಗಿ ಹತ್ತಾರು ಯೋಜನೆಗಳನ್ನು ಕೊಟ್ಟಿದೆ. ನಾವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಲ್ಲೋ ಎಡವಿದ್ದೇವೆ. ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತೆಗೆದುಕೊಂಡು ಹೋಗುವುದರಲ್ಲಿ ಕೊರತೆ ಆಗಿದೆ. ರೈತರ ವಿಶ್ವಾಸಗಳಿಸುವುದರಲ್ಲಿ ಕೊರತೆ ಆಗಿದೆ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಹಾಗೂ ಇತರರು ರೈತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದಲ್ಲಾಳಿಗಳ ಪರ ಯಾರು ಇದ್ದಾರೆ ಎಂದು ಕೂಡಾ ಹತ್ತಾರು ಹೋರಾಟಗಳಲ್ಲಿ ತಿಳಿದುಬಂದಿದೆ" ಎಂದಿದ್ದಾರೆ.
"ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ರೈತರ ಹತ್ತಿರ ಹೋಗುವ ಯತ್ನವನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ರೈತರ ಮನವೊಲಿಸುವ ಕೆಲಸವನ್ನು ಮಾಡುತ್ತೇವೆ. ಬಿಲ್ನಿಂದ ರೈತರಿಗೆ ತೊಂದರೆ ಆಗುತ್ತದೋ ಅಥವಾ ಇಲ್ಲವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬಹುದು.ರೈತರ ಬಿಲ್ನಲ್ಲಿ ಉದ್ದೇಶಪೂರ್ವಕ ಗಲಭೆಗಳು ನಡೆದಿವೆ. ಎಲ್ಲವನ್ನೂ ಸಹ ಬಿಜೆಪಿ ನಾಯಕತ್ವ ಮುಕ್ತವಾಗಿ ಸ್ವೀಕರಿಸುತ್ತದೆ" ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಹಗರಣದ ಬಗ್ಗೆ ಮಾತನಾಡಿದ ಅವರು, "ಈ ಬಗ್ಗೆ ನಾವೆಲ್ಲೂ ತನಿಖೆ ಬೇಡ ಎಂದು ಹೇಳಿಲ್ಲ. ಎಲ್ಲಾ ರೀತಿಯಿಂದಲೂ ತನಿಖೆ ಮಾಡೇ ಮಾಡುತ್ತೇವೆ. ಸದ್ಯದಲ್ಲೇ ಯಾವ ಕಾಂಗ್ರೆಸ್ ಯುವ ನಾಯಕರು ಡ್ರಗ್ ಪೆಡ್ಲರ್ಗಳು ಹೇಗೆ ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಬೇಕು. ಇದು ಕೊನೆಗೆ ಕಾಂಗ್ರೆಸ್ ಕಾಲಿಗೆ ಸುತ್ತಿಕೊಳ್ಳುತ್ತದೆ" ಎಂದಿದ್ದಾರೆ.