ಕಾರ್ಕಳ, ನ 19 (DaijiworldNews/MS): ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಂಪರ್ಕದ ಸುಸಜ್ಜಿತ ಕಾಂಕ್ರೀಟ್ ರಸ್ತೆಯನ್ನು ಅಗೆದಿರುವುದರಿಂದ ಅದರಲ್ಲಿದ್ದ ಕಬ್ಬಿಣದ ಸರಳು ಹೊರಚಾಚಿಕೊಂಡಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿರುವ ಘಟನೆಯು ನಗರದ ಆನೆಕೆರೆ-ದಾನಸಾಲೆ ರಸ್ತೆಯಲ್ಲಿ ಸಂಭವಿಸುತ್ತಿದೆ.
ಏನಿದು ಯೋಜನೆ?
2019-20ನೇ ಸಾಲಿಗೆ ಮಂಜೂರಾದ ನಗರೋತ್ಥಾನ ಯೋಜನೆಯಡಿಯಲ್ಲಿ ಕರ್ನಾಟಕ ಸರಕಾರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯಡಿ ಈ ಕಾಮಗಾರಿ ನಡೆಸುತ್ತಿದೆ. ಅತೀ ಎತ್ತರದ ಪ್ರದೇಶವಾಗಿರುವ ಕಾರ್ಕಳ ನಗರದ ಹಿರಿಯಂಗಡಿ ಪರ್ಪಲೆಗವಿ ಎಂಬಲ್ಲಿ 5 ಲಕ್ಷ ಲೀಟರ್ ಸಾಮಾರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಗೊಳ್ಳುತ್ತಿದೆ. ಈ ಟ್ಯಾಂಕ್ ಪರಿಪೂರ್ಣಗೊಂಡರೆ ಕುಂಟಲ್ಪಾಡಿ, ಹಿರಿಯಂಗಡಿ, ಗಾಂಧಿಮೈದಾನ, ಆನೆಕೆರೆ, ಕಾಬೆಟ್ಟು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಸಾಧ್ಯವಾಗುತ್ತದೆ.
ಇದಕ್ಕಾಗಿ ಕಾರ್ಕಳದ ಐತಿಹಾಸಿಕ ಹಿನ್ನಲ್ಲೆಯುಳ್ಳ ರಾಮುಸಮುದ್ರದ ನೀರನ್ನೇ ಆಶ್ರಯಿಸಿಕೊಳ್ಳಲಾಗಿದೆ. ಸುಮಾರು 4 ಕಿ.ಮೀ ದೂರದಲ್ಲಿ ಇರುವ ಟ್ಯಾಂಕ್ಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಭಾರೀ ಗಾತ್ರದ ಕಬ್ಬಿಣದ ಪೈಪ್ಗಳನ್ನು ಅಳವಡಿಸಲೆಂದು ಆನೆಕರೆ-ದಾನಸಾಲೆಯ ಕಾಂಕ್ರೀಟ್ ರಸ್ತೆಯ ಒಂದು ಪಾರ್ಶ್ವವನ್ನು ಅಗೆದು ಹಾಕಲಾಗಿದೆ.ರಾಮಸಮುದ್ರದ ತಳಭಾಗದಲ್ಲಿ ಅದಕ್ಕಾಗಿ 5 ಲಕ್ಷ ಲೀಟರ್ ನೀರು ಸಂಗ್ರಹಣದ ಟ್ಯಾಂಕ್ ನಿರ್ಮಾಣಗೊಳ್ಳುತ್ತಿದೆ. ಜೊತೆಗೆ ಪಂಪ್ಹೌಸ್ ನಿರ್ಮಾಣದ ಕಾಮಗಾರಿಯೂ ನಡೆಯುತ್ತಿದೆ. ನ್ಯಾಯಾಲಯದ ರಸ್ತೆಯ ವರೆಗೆ 350 ಎಂಎಂ ಗಾತ್ರದ ಪೈಪ್ ಅಳವಡಿಸಿ ಅಲ್ಲಿಂದ ಹಿರಿಯಂಗಡಿ ಪರ್ಪಲೆಗವಿಯ ತನಕ 300 ಎಂಎಂ ಗಾತ್ರದ ಪೈಪ್ ಜೋಡಣೆಯು ಈ ಯೋಜನೆಯಲ್ಲಿದೆ.
ಯೋಜನೆಯ ಅಂದಾಜು ವೆಚ್ಚ ರೂ. 4 ಕೋಟಿ, 53 ಲಕ್ಷ ಆಗಿರುತ್ತದೆ. ಟೆಂಡರ್ ಮೊತ್ತವು ರೂ.3 ಕೋಟಿ 20 ಲಕ್ಷ ಆಗಿದ್ದು, ಬಳ್ಳಾರಿಯ ಅಖಿಲ್ ಇಫ್ರೋ ಸಂಸ್ಥೆಯು ಕಾಮಗಾರಿ ವಹಿಸಿಕೊಂಡಿದೆ.
ಕಾಂಕ್ರೀಟ್ ರಸ್ತೆ:
ರಾಜ್ಯದಲ್ಲಿ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾರ್ಕಳ ಶಾಸಕ ಹೆಚ್.ಗೋಪಾಲ ಭಂಡಾರಿಯಾಗಿದ್ದರು. ಅದೇ ಅವಧಿಯಲ್ಲಿ ಕಾರ್ಕಳದಲ್ಲಿ ಮಹಾಮಸ್ತಾಕಾಭಿಷೇಕ-2002 ಜರುಗಿತ್ತು. ಆ ಸಂದರ್ಭದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿತ್ತು. ಅದರಲ್ಲಿ ಆನೆಕೆರೆ-ದಾನಸಾಲೆ ಕಾಂಕ್ರೀಟ್ ರಸ್ತೆ ಕಾಮಗಾರಿ ಒಂದಾಗಿದೆ.
ಮಂಗಳೂರು ಹಾಗೂ ಬೆಳ್ತಂಗಡಿ ಭಾಗಗಳಿಂದ ಕಾರ್ಕಳ ನಗರದಕ್ಕೆ ಅಗಮಿಸುವ ಬಸ್ಸು ನಿಗರ್ಮಿಸಬೇಕಾದರೆ ದಾನಸಾಲೆ- ಆನೆಕೆರೆ ರಸ್ತೆಯ ಮೂಲಕ ಹಾದು ಹೋಗಬೇಕಾಗುತ್ತದೆ. ಕಿರಿದಾದ ಕಾಂಕ್ರೀಟ್ ಈ ರಸ್ತೆಯ ಒಂದು ಪಾರ್ಶ್ವವನ್ನು ಪೈಪ್ ಅಳವಡಿಕೆಗಾಗಿ ಅಗೆದು ಸುಮಾರು15 ದಿನಗಳು ಸಂದಿದೆ. ಕಾಮಗಾರಿ ಮುಂದುವರಿಸದೇ ಅರ್ಧಕ್ಕೆ ಕೈಬಿಡಲಾಗಿದೆ. ನಡೆಸಿರುವ ಕಾಮಗಾರಿಯ ಕುರಿತು ಇಲಾಖಾಧಿಕಾರಿಗಳು ಗಮನ ಹರಿಸದೇ ಹೋದುದರಿಂದ ಹೊಸ ಸಮಸ್ಯೆಗಳು ತಲೆದೋರಿದೆ.
ಪ್ರವಾಸಿಗರಿಗೆ ಕಂಟಕ
ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚರ್ಚ್, ಗೋಮ್ಮಟ್ಟಬೆಟ್ಟ, ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ಕ್ಷೇತ್ರ, ಹಿರಿಯಂಗಡಿ ಬಸದಿ, ಆನೆಕೆರೆ ಬಸದಿ, ಚತುಮುರ್ಖ ಬಸದಿ, ಕೋಟಿ-ಚೆನ್ನಯ ಥ್ರೀಂ ಪಾರ್ಕ್ ಸೇರಿದಂತೆ ಧಾರ್ಮಿಕ, ಪ್ರವಾಸದ್ಯೋಮಗಳು ಕಾರ್ಕಳ ತಾಲೂಕಿನಲ್ಲಿದೆ. ಅದರ ವೀಕ್ಷಣೆಗೆಂದು ಅಸಂಖ್ಯಾತ ಪ್ರವಾಸಿಗರು ವಿವಿಧ ವಾಹನಗಳಲ್ಲಿ ಹಾದು ಹೋಗುವುದು ಇದೇ ಆನೆಕೆರೆ-ದಾನಸಾಲೆ ರಸ್ತೆಯ ಮೂಲಕ.
ಕೈಗೊಂಡ ಕಾಮಗಾರಿಯ ಕುರಿತು ಸಾರ್ವಜನಿಕರ ಅವಗಾಹನೆ ತರುವ ರೀತ್ಯಾದಲ್ಲಿ ಯಾವುದೇ ಸೂಚನಾ ಫಲಕವಾಗಲಿ, ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸದೇ ಇರುವುದರಿಂದ ವಾಹನ ಚಾಲಕರ ಗಮನಕ್ಕೆ ಅರಿಯದೇ ವಾಹನಗಳ ಟಯರ್ ರಸ್ತೆಯ ಮೇಲ್ಭಾಗದಲ್ಲಿ ಚಾಚಿಕೊಂಡಿರುವ ಕಬ್ಬಣದ ಸರಳಿಗೆ ಸಿಲುಕಿ ಸ್ಫೋಟಗೊಳ್ಳುತ್ತಿದೆ. ಇದರಿಂದ ಆರ್ಥಿಕ ನಷ್ಟವು ಸಂಭವಿಸುತ್ತಿದೆ.
ಸೂಕ್ತಕ್ರಮಕ್ಕೆ ಸೂಚನೆ -ರೂಪಾ ಶೆಟ್ಟಿ, ಕಾರ್ಕಳ ಪುರಸಭೆ
ಕರ್ನಾಟಕ ರಾಜ್ಯ ಕುಡಿಯುವುವ ನೀರು ಹಾಗೂ ಒಳಚರಂಡಿ ಮಂಡಳಿಯು ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದೆ. ಸಾರ್ವಜನಿಕರಿಗೆ ದಕ್ಕೆಯಾಗುವ ರೀತ್ಯಾದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ದೂರಿನನ್ವಯ ಈಗಾಗಲೇ ಆ ಇಲಾಖೆಯ ಇಂಜಿನಿಯರ್ ಅವರಿಗೆ ಸೂಚನೆ ನೀಡಿ, ಎಚ್ಚರಿಕೆ ಘಲಕ ಹಾಗೂ ರಿಬ್ಬನ್ ಅಳವಡಿಸುವಂತೆ ತಿಳಿಸಿದ್ದೇನೆ.