ಮಂಗಳೂರು, ನ.19 (DaijiworldNews/PY): ಮಹಿಳೆಯೋರ್ವರಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪಕ್ಕ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ಅತ್ತೆ, ಮಾವ ಸೇರಿದಂತೆ ನಾಲ್ವರನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ನಗರದ ಎಮ್ಮೆಕೆರೆಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ನಫೀಸಾ, ಫಾತಿಮಾ ಮಹಮ್ಮದ್, ಮುಹಮ್ಮದ್ ಅಬ್ದುಲ್ ಖಾದರ್, ಉಮೈರಾ ಬಾನು ಎಂದು ಗುರುತಿಸಲಾಗಿದೆ.
ಹೆಚ್ಚು ವರದಕ್ಷಿಣೆ ತರುವಂತೆ ಒತ್ತಾಯಿಸಿ ನನಗೆ ಪತಿ, ಅತ್ತೆ, ಮಾವ, ನಾದಿನಿಯರು ಸೇರಿ 9 ಮಂದಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ನಗರದ ಎಮ್ಮೆಕೆರೆಯ ಫಾತಿಮಾ ಝಾಹಿದಾ (23) ದೂರು ನೀಡಿದ್ದಾರೆ.
ದೂರಿನಂತೆ ಫಾತಿಮಾ ಝಾಹಿದಾರ ಪತಿ, ಮೂಲತಃ ಉಪ್ಪಳದ ಪ್ರಸಕ್ತ ಗೋವಾದಲ್ಲಿ ನೆಲೆಸಿರುವ ಮುಹಮ್ಮದ್ ತಾಜುದ್ದೀನ್, ಮಾವ ಮುಹಮ್ಮದ್ ಅಬ್ದುಲ್ ಖಾದರ್, ಅತ್ತೆ ನಫೀಸಾ, ನಾದಿನಿ ಉಮೈರಾ ಬಾನು ಹಾಗೂ ಉಮೈರಾ ಬಾನು ಅವರ ಪತಿ ಫೈಝಲ್ ವಿರುದ್ದ ಪ್ರಕರಣ ದಾಖಲಾಗಿತ್ತು.
ತಾಜುದ್ದೀನ್ ಎರಡನೇ ವಿವಾಹವಾಗಿದ್ದು, ವಿವಾಹಕ್ಕೆ ಸಹಕರಿಸಿದ್ದ ಮಂಗಳೂರಿನ ರಫೀಕ್, ಎರಡನೇ ಪತ್ನಿ ನಫೀನಾ, ಆಕೆಯ ತಂದೆ ಶಾಮಿಲ್, ತಾಯಿ ಬದ್ರು ಮೇಲು ಕೂಡಾ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.
ಕರ್ತವ್ಯಕ್ಕೆ ಅಡ್ಡಿ:
ಸಂತ್ರಸ್ತೆ ನೀಡಿದ ದೂರನ್ನು ಆಧರಿಸಿ ಆರೋಪಿಗಳ ಮನೆಗೆ ನೋಟಿಸ್ ನೀಡಲು ಹೋದ ಮಹಿಳಾ ಹೆಡ್ಕಾನ್ಸ್ಟೇಬಲ್ ಶ್ರೀಲತಾ ಕರ್ತವ್ಯಕ್ಕೆ ಆರೋಪಿಗಳು ಅಡ್ಡಿಪಡಿಸಿದ ಕುರಿತು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ನೋಟಿಸ್ ಪಡೆಯಲು ಆರೋಪಿ ಮುಹಮ್ಮದ್ ತಾಜುದ್ದೀನ್ ನಿರಾಕರಿಸಿದ್ದಾರೆ. ಅಲ್ಲದೇ, ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.