ಉಡುಪಿ, ನ.19 (DaijiworldNews/PY): ಕೇಂದ್ರ ಸರ್ಕಾರದಿಂದ ಕೃಷಿ ಕಾಯ್ದೆ ವಾಪಾಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದ್ದು, "ಕೃಷಿ ಕಾಯ್ದೆ, ಪರಿಷ್ಕೃತವಾಗಿ ಮತ್ತೆ ಮರುಮಂಡನೆ ಮಾಡುವ ಸಾಧ್ಯತೆ ಇದೆ" ಎಂದಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೃಷಿ ಕಾಯ್ದೆ, ಪರಿಷ್ಕೃತವಾಗಿ ಮತ್ತೆ ಮರುಮಂಡನೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಪೂರ್ಣ ಅಧ್ಯಯನ ಮಾಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ" ಎಂದಿದ್ದಾರೆ.
"ಕೇಂದ್ರದಿಂದ ಕೃಷಿ ಕಾಯ್ದೆ ವಾಪಾಸ್ ಪಡೆದುಕೊಂಡ ವಿಚಾರಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಕೃಷಿಕರು, ಎಪಿಎಂಪಿ ಪರವಾಗಿ ಇದ್ದ ಕಾಯ್ದೆಯಾಗಿತ್ತು. ಕೃಷಿಕರಿಗೆ ಆರ್ಥಿಕ ಶಕ್ತಿ ಕೊಡಲು ಈ ಕಾಯ್ದೆಯನ್ನು ಮಾಡಲಾಗಿತ್ತು. ಇದು ಬಹುತೇಕ ರೈತರ ಹಿತಕ್ಕಾಗಿ ತಂದ ಕಾಯ್ದೆ. ಒಂದಷ್ಟು ಚರ್ಚೆಗಳು ಇರುವ ಹಿನ್ನೆಲೆ ಮರುಮಂಡನೆ ಮಾಡುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.
"ಪ್ರಜಾಪ್ರಭುತ್ವದಲ್ಲಿ ಮಣಿಯುವುದು, ಸೋಲುವುದು ಎಂದು ಏನಿಲ್ಲ. ಅನೇಕ ಬಾರಿ ಕಾಯ್ದೆಗಳ ತಿದ್ದುಪಡಿ ಮಾಡಲಾಗಿದೆ. ಮತ್ತಷ್ಟು ಉತ್ಕೃಷ್ಟವಾಗಿ ಮರುಮಂಡನೆ ಆಗುವ ಸಾಧ್ಯತೆ ಇದೆ. ಸದುದ್ದೇಶದ ಕಾರಣದಿಂದ ತಂದಿರುವ ಕಾಯ್ದೆಗೆ ಮತ್ತಷ್ಟು ಸದುದ್ದೇಶ ತರುವ ಉದ್ದೇಶದಿಂದ ಹಿಂಪಡೆಯಲಾಗಿದೆ" ಎಂದು ಹೇಳಿದ್ದಾರೆ.
ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಕೃಷಿ ಕಾನೂನುಗಳ ಬಗ್ಗೆ ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದ್ದು,ನಿಜವಾದ ಹಾಗೂ ಶುದ್ಧ ಹೃದಯದಿಂದ ನಾನು ಭಾರತಕ್ಕೆ ಕ್ಷಮೆಯಾಚಿಸುತ್ತೇನೆ. ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ನಾವು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತೇವೆ" ಎಂದು ತಿಳಿಸಿದ್ದಾರೆ.