ಮಂಗಳೂರು, ನ.19 (DaijiworldNews/PY): ಮಹಾನಗರ ಪಾಲಿಕೆಯ ಅಧಿಕಾರಿಗಳ ಸೋಗಿನಲ್ಲಿ ಮನೆಯೊಂದಕ್ಕೆ ಒಂದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ನಗರದ ಉರ್ವಸ್ಟೋರ್ ಬಳಿಯ ದಡ್ಡಲ್ಕಾಡ್ನಲ್ಲಿ ನಡೆದಿದೆ.
ನ.16ರ ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ದಡ್ಡಲ್ಕಾಡ್ನ ಮಹಿಳೆ ಇದ್ದ ಮನೆಯೊಂದಕ್ಕೆ ಬಂದಿದ್ದ ಇಬ್ಬರು ಮಂಗಳೂರು ನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಎಂದು ಹೇಳಿ ಸ್ವಚ್ಛತೆಯ ಕುರಿತು ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದಾರೆ. ಬಳಿಕ ಮಹಿಳೆಯನ್ನು ಮನೆಯ ಹಿಂಬದಿಗೆ ಕರೆದುಕೊಂಡು ಹೋಗಿ ಸ್ವಚ್ಛತೆ ಬಗ್ಗೆ ನಾಟಕವಾಡಿದ್ದಾರೆ. ಈ ವೇಳೆ ಮಹಿಳೆ ನೆರೆಮನೆಯವರನ್ನು ಕರೆದಿದ್ದು, ನೆರೆಮನೆಯವರು ಬಂದು ಸಂಶಯ ವ್ಯಕ್ತಪಡಿಸಿ, ಅವರಲ್ಲಿ ಗುರುತಿನ ಚೀಟಿ ನೀಡಿ ಎಂದು ಕೇಳಿದ್ದಾರೆ. ಆಗ ಆ ಇಬ್ಬರು ಗುರುತಿನ ಚೀಟಿ ಬೈಕ್ನಲ್ಲಿದೆ ತರುತ್ತೇವೆ ಎನ್ನುತ್ತಾ ಅಲ್ಲಿಂದ ವಾಪಾಸ್ಸಾಗಿದ್ದಾರೆ.
ಸಂಜೆ ವೇಳೆ ಮಹಿಳೆ ಮನೆಯ ಒಳಗಿದ್ದ ಕಪಾಟಿನಲ್ಲಿ ನೋಡಿದಾಗ 68 ಗ್ರಾಂ ಚಿನ್ನಾಭರಣ ಹಾಗೂ 71,000 ರೂ. ನಗದು ಕಳವಾಗಿರುವುದು ಗಮನಕ್ಕೆ ಬಂದಿದೆ.
ಇಬ್ಬರು ವ್ಯಕ್ತಿಗಳು ಮನೆಯ ಹಿಂಭಾಗದಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಮಹಿಳೆಯ ಗಮನಕ್ಕೆ ಬಾರದಂತೆ ಇನ್ನೋರ್ವ ಮನೆಯೊಳಗೆ ಪ್ರವೇಶಿಸಿ ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ಕಪಾಟಿನ ಕೀ ಕಪಾಟಿನ ಎದುರೇ ನೇತು ಹಾಕಿದ್ದರಿಂದ ಸುಲಭವಾಗಿ ಕಳವು ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.