ಕಾಸರಗೋಡು, ನ. 18 (DaijiworldNews/SM): ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೊರ ಚಿಕಿತ್ಸಾ ವಿಭಾಗವನ್ನು ಡಿಸಂಬರ್ ಮೊದಲ ವಾರದಲ್ಲಿ ಆರಂಭಿಸಲಾಗುವುದು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು.
ಅವರು ಗುರುವಾರ ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಈ ವಿಷಯ ತಿಳಿಸಿದರು. ನ್ಯೂರೋಲಜಿಸ್ಟ್ ರನ್ನು ಶೀಘ್ರ ನೇಮಿಸಲಾಗುವುದು. ವೈದ್ಯಕೀಯ ಕಾಲೇಜಿನ ಕಾಮಗಾರಿ ಹಾಗೂ ವ್ಯವಸ್ಥೆ ಕುರಿತ ಪರಿಶೀಲನೆ ನಡೆಸಿ ಅವಲೋಕನ ನಡೆಸಲು ಆಸ್ಪತ್ರೆಯ ಉಸ್ತುವಾರಿ ಹೊಂದಿರುವ ಡಾ. ಆದರ್ಶ್ ರವರ ಆಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಆರೋಗ್ಯ ವಲಯದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಸರಕಾರ ಮುಂದಾಗಿದೆ. ಟಾಟಾ ಕೋವಿಡ್ ಆಸ್ಪತ್ರೆಯನ್ನು ಮುಂದಿನ ದಿನಗಳಲ್ಲಿ ಉಳಿದ ಚಿಕಿತ್ಸಾ ಸೌಲಭ್ಯವನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ವರದಿ ಸಲ್ಲಿಸಲು ಆರೋಗ್ಯ ಇಲಾಖಾ ನಿರ್ದೇಶಕರಿಗೆ ಆದೇಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.