ಬಂಟ್ವಾಳ, ನ.18 (DaijiworldNews/PY): ಕೊರೊನಾ ಸಾಂಕ್ರಾಮಿಕ ರೋಗದಿಂದ ರಕ್ಷಿಸಿದ ದೇವರಿಗೆ ಕೃತಜ್ಞತೆ ಹೇಳುವ ಮೂಲಕ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯ ಎಲ್ಲಾ ಕ್ರೈಸ್ತ ಭಕ್ತಾದಿಗಳು ನ.17ರ ಬುಧವಾರ ಸಾಂತ್ ಮಾರಿ ಹಬ್ಬವನ್ನು ಆಚರಿಸಿದರು.
ಮೊಗರ್ನಾಡ್ ವಲಯದ ವಿಕಾರ್ವಾರ ಅತೀ ವಂದನೀಯ ಡಾ.ಮಾರ್ಕ್ ಕ್ಯಾಸ್ತೆಲಿನೊ, ಪ್ರಧಾನ ಧರ್ಮಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವದಿಸಿದರು.
ದೆಲಂತ ಬೆಟ್ಟು ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾದರ್ ಸುನಿಲ್ ಪಿಂಟೊ ಅವರು ಪ್ರವಚನ ನೀಡುತ್ತಾ, "ಸಾಂತ್ ಮಾರಿ ಹಬ್ಬ ಚರ್ಚ್ ಕುಟುಂಬದ ಹಬ್ಬ. ಸಂತ ಜೋಸೆಫರು ಕುಟುಂಬದಲ್ಲಿ ಮಕ್ಕಳನ್ನು ಪ್ರೀತಿಸಿದ ಹಾಗೆ ನಾವೂ ಒಬ್ಬರಿಗೊಬ್ಬರು ಮಕ್ಕಳ ಹಾಗೆ ಪ್ರೀತಿಸಬೇಕು. ಕ್ರೈಸ್ತ ಕುಟುಂಬದಲ್ಲಿ ತಪ್ಪುಗಳು ನಡೆದು, ಭಿನ್ನಾಭಿಪ್ರಾಯಗಳು ಎದುರಾದಾಗ ಅದನ್ನು ಏಕತಾ ಭಾವದಿಂದ ಸರಿಪಡಿಸಬೇಕೇ ಹೊರತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಮಾನ ಹರಾಜು ಮಾಡುವುದು ಮಹಾ ಪಾಪ. ಪರಸ್ಪರ ಕ್ಷಮಿಸಿ ಬಾಳುವುದೇ ನಿಜವಾದ ಸಾಂತ್ ಮಾರಿ ಹಬ್ಬದ ಆಶಯ" ಎಂದರು.
ವಲಯದ ಇತರ ಧರ್ಮಗುರುಗಳು ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಚರ್ಚ್ ಧರ್ಮಗುರುಗಳಾದ ಫಾದರ್ ಗ್ರೆಗರಿ ಪಿರೇರಾ ಅವರ ಜನ್ಮ ದಿನವನ್ನು ಆಚರಿಸಲಾಯಿತು.