ಗುಂಡಿಬೈಲು, ಅ 18 (DaijiworldNews/MS): ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಗುಂಡಿಬೈಲ್ನ ಜುಮಾದಿಕಟ್ಟೆ ದೇವಸ್ಥಾನದ ಸಮೀಪ ವಾಸವಾಗಿರುವ ಬಾಬು ಆಚಾರ್ಯ ಅವರು ತಮ್ಮ ಹಳೆ ಮನೆಯ ಹಿಂಬದಿಯಲ್ಲಿ ಹೊಸ ಮನೆ ನಿರ್ಮಾಣ ಮಾಡಿದ್ದು, ಹಳೆ ಮನೆಯಲ್ಲಿ ಮನೆ ದೇವರು ಇದ್ದುದರಿಂದ ಹಗಲು ಹೊತ್ತು ಹಳೆ ಮನೆಯಲ್ಲೇ ಅಡುಗೆ ಮಾಡಿ ವಾಸಿಸುತ್ತಿದ್ದರು. ರಾತ್ರಿ ಹೊಸ ಮನೆಯಲ್ಲಿ ಹೋಗಿ ಮಲಗುತ್ತಿದ್ದರು.
ನ.16 ರ ರಾತ್ರಿ 9.15ರಿಂದ ನ.17ರ ಬೆಳಗಿನ ಜಾವ 5.30ರ ನಡುವೆ ಹಳೆ ಮನೆಗೆ ನುಗ್ಗಿದ ಕಳ್ಳರು ಮನೆಯ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಕಪಾಟಿನಲ್ಲಿದ್ದ ಬೀಗ ಮುರಿದು ಅದರಲ್ಲಿದ್ದ ಚೈನ್ , ಉಂಗುರ, ಕಾಶಿತಾಳಿ ಸರ, ಮುತ್ತಿನ ಸರ ಚಿನ್ನದ ಬಳೆಗಳು ಒಟ್ಟು 90 ಗ್ರಾಂ ತೂಕದ ರೂ. 3,60,000 ರೂ ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿಯ ಹರಿವಾಣ, ಬೆಳ್ಳಿ ಲೋಟ , ಬೆಳ್ಳಿ ಕವಳಿಕೆ ಸೌಟು ಒಟ್ಟು ರೂ. 10,000 ರೂ ಮೌಲ್ಯದ ಬೆಳ್ಳಿ ಸಾಮಾಗ್ರಿಗಳ ಜೊತೆ ದೇವರ ಡಬ್ಬದಲ್ಲಿದ್ದ ಅಂದಾಜು 400 ರೂ. ಮತ್ತು ಅವರ ಅಣ್ಣನಿಗೆ ಸೇರಿದ ಜಾಗದ ಮೂಲ ದಾಖಲೆಗಳನ್ನು ಕಳವು ಮಾಡಿದ್ದಾರೆ.
ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3, 70,400 ರೂ. ಆಗಿದೆ. ಉಡುಪಿ ನಗರ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ