ಉಡುಪಿ ಅ 18 (DaijiworldNews/MS):ಬುಧವಾರ ಸಂಜೆ ನಡೆದ ಅತ್ಯಂತ ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ನಿಂದ ಎಂ.ಎನ್ ರಾಜೇಂದ್ರಕುಮಾರ್ಗೆ ವಿಧಾನಪರಿಷತ್ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಕಣಚೂರು ಮೋಹನ್ ಹಾಗೂ ಎಂ.ಎನ್.ರಾಜೇಂದ್ರಕುಮಾರ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ .ಎಂ.ಎನ್.ರಾಜೇಂದ್ರಕುಮಾರ್ ಅವರಿಗೆ ದ.ಕ. -ಉಡುಪಿಯಿಂದ ಕಾಂಗ್ರೆಸ್ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಡಿಕೆಶಿ ಅವರನ್ನು ಒತ್ತಾಯಿಸಿದ್ದಾರೆ.
ಎಂ.ಎನ್.ರಾಜೇಂದ್ರಕುಮಾರ್ ಅವರು ಎಂಎಲ್ಸಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಅವರ ಚುನಾವಣಾ ಕಚೇರಿ ಉದ್ಘಾಟನೆಯಾಗಿದೆ. ಈ ಭೇಟಿಯೂ ಪರಿಷತ್ ಚುನಾವಣೆಯ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಈ ಹಿಂದೆ ಚುನಾವಣೆ ಘೋಷಣೆಯಾದಾಗ 11 ಜನ ಕಾಂಗ್ರೆಸ್ ಆಕಾಂಕ್ಷಿಗಳಿದ್ದರು. ನಂತರ ಅಚ್ಚರಿಯ ನಡೆಯಲ್ಲಿ ಬ್ರಹ್ಮಾವರದಿಂದ ಪಕ್ಷದ ನೆಲಮಟ್ಟದ ಕಾರ್ಯಕರ್ತ ಭುಜಂಗ ಶೆಟ್ಟಿ ಪಕ್ಷದಿಂದ ದಕ್ಷಿಣ ಕನ್ನಡ-ಉಡುಪಿಗೆ ಸರ್ವಾನುಮತದ ಅಭ್ಯರ್ಥಿಯಾಗುವ ನಿರೀಕ್ಷೆ ಇತ್ತು.
ಕೆಲವು ಕಾಂಗ್ರೆಸ್ ನಾಯಕರ ಬೆಂಬಲದೊಂದಿಗೆ ಸಹಕಾರಿ ಮುಖಂಡ ಎಂಎನ್ ರಾಜೇಂದ್ರಕುಮಾರ್ ಪಕ್ಷದಿಂದ ಟಿಕೆಟ್ ಬಯಸುತ್ತಿರುವ ಕಾರಣ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.