ಉಡುಪಿ, ನ. 17 (DaijiworldNews/SM): 100 ರೂಪಾಯಿ ದುಡಿಯುವ ನನಗೆ 24,130 ರೂಪಾಯಿ ಮೌಲ್ಯದ ಹೋಟೆಲ್ ನಲ್ಲಿ ಭಾರತ ಸರಕಾರ ನನಗೆ ತಂಗಲು ವ್ಯವಸ್ಥೆ ಮಾಡಿತ್ತು. ಹಳ್ಳಿಯಲ್ಲಿ ಶಾಲೆಯ ಮುಖವನ್ನೇ ನೋಡದ ನನಗೆ ಪದ್ಮಶ್ರೀ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.
ಬುಧವಾರ ಎಂ.ಜಿ.ಎಂ ಕಾಲೇಜಿನ ಎನ್.ಎಸ್.ಎಸ್ ಹಾಗು ಮಹಾತ್ಮ ಗಾಂಧಿ ರೋವರ್ಸ್ ಘಟಕ ಹಾಗೂ ಕಸ್ತೂರ್ ಬಾ ರೇಂಜರ್ಸ್ ಘಟಕದ ಜಂಟಿ ಆಶ್ರಯದಲ್ಲಿ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ "ಆರೇಂಜ್ ಈಸ್ ನಾಟ್ ಜಸ್ಟ್ ಏ ಫ್ರೂಟ್" ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರು ವಿದ್ಯಾರ್ಥಿಗಳೇ ನಮ್ಮ ದೇಶದ ಸಂಪತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಕೂಡಾ ಉನ್ನತ ಹುದ್ದೆಯನ್ ನು ಏರಲು ಸಾಧ್ಯ ಇದೆ. ತಮಗೆ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಉತ್ತಮವಾಗಿ ಬಳಸಿಕೊಳ್ಳಬೇಕು" ಎಂದು ಕರೆನೀಡಿದರು.
ಕಾರ್ಯಕ್ರದಲ್ಲಿ ಹಾಜಬ್ಬರನ್ನು ಕಾಲೇಜು ಹಾಗೂ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ್, ಪದವಿ ಪೂರ್ವ ಕಾಲೇಜಿನ ಮಾಲತಿದೇವಿ, ಡಾ. ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತ ಅಧಿಕಾರಿ ಡಾ. ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು