ಉಡುಪಿ, ನ 17 (DaijiworldNews/MS): ರಾಜ್ಯದ 23ಜಿಲ್ಲೆಗಳ ಡಯಾಲಿಸಿಸ್ ಕೇಂದ್ರಗಳಲ್ಲಿನ ಅವ್ಯವಸ್ಥೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಪ್ರತಿಭಟನೆಯು ಇಂದು ಎರಡನೇ ದಿನವನ್ನು ತಲುಪಿದೆ. ಇಂದು ಉಡುಪಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೂಟ್ ಪಾಲಿಶ್ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಅನ್ಸಾರ್ ಅಹ್ಮದ್ ಮಾತನಾಡಿ "ಕರ್ನಾಟಕದಲ್ಲಿ ಇದೀಗ ಸುಮಾರು 122 ಘಟಕಗಳನ್ನು ಖಾಸಗಿಗೆ ವಹಿಸಿ ಕೊಟ್ಟಿದ್ದು ಇವುಗಳು ಇದೀಗ ಕಾರ್ಯಾಚರಣೆ ಮಾಡುತಿಲ್ಲ. ಇದರಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಪ್ರಯೋಜನವನ್ನು ಪಡೆಯುತಿದ್ದಾರೆ. ಉಡುಪಿಯಲ್ಲಿ10 ಡಯಾಲಿಸಿಸ್ ಯಂತ್ರಗಳು ಇದ್ದು ಇದರಲ್ಲಿ ಈಗಾಗಲೇ 5 ಯಂತ್ರಗಳು ಹಾಳಾಗಿವೆ. ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂಬ ಕಾರಣಕ್ಕೆ ಇಂದು ಸಂಜೆಯ ವರೆಗೆ ನಾವು ಬೂಟ್ ಪಾಲಿಶ್ ಕೆಲಸ ಮಾಡಿ ಬಂದ ಹಣವನ್ನು ರಾಜ್ಯ ಸರಕಾರಕ್ಕೆ ಒಪ್ಪಿಸುತ್ತೆವೆ. ರಾಜ್ಯ ಸರಕಾರಕ್ಕೆ ಮಾನ ಮರ್ಯಾದೆ ನಾಚಿಕೆ ಇದ್ದಲ್ಲಿ ಇವತ್ತು ಸಂಜೆಯ ಒಳಗೆ ಈ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದ ಪಕ್ಷದಲ್ಲಿ ನಾಳೆ ಬೆಳಗ್ಗೆ ಇಬ್ಬರು ಕಾರ್ಯಕರ್ತರ ತಲೆ ಕೂದಲನ್ನು ತೆಗೆದು ಅದನ್ನು ಸರಕಾರಕ್ಕೆ ಕೊಡುವ ಕೆಲಸವನ್ನು ನಾವು ಮಾಡುತ್ತೆವೆ" ಎಂದರು.
ಉಡುಪಿ ಸೇರಿದಂತೆ ರಾಜ್ಯದ 23 ಜಿಲ್ಲೆಗಳ 122 ಘಟಕಗಳಲ್ಲಿ ಇದೀಗ ಸಿಬ್ಬಂದಿಗಳ ವೇತನ ಸೇರಿದಂತೆ ಡಯಾಲಿಸಿಸ್ ಕಾರ್ಯಕ್ಕೆ ರಾಸಾಯನಿಕಗಳ ಕೊರತೆ ಕೂಡಾ ಎದುರಾಗಿದೆ. ಇದರಿಂದಾಗಿ ಡಯಾಲಿಸಿಸ್ ಗೆ ಒಳಗಾಗಲು ಬರುವ ರೋಗಿಗಳು ತೀವ್ರತರದ ಸಮಸ್ಯೆಗೆ ಒಳಗಾಗಿದ್ದಾರೆ.