ಬೆಳ್ತಂಗಡಿ, ನ.17 (DaijiworldNews/PY): ಚಿಕ್ಕಮಗಳೂರು ಆಸುಪಾಸು ಹಾಗೂ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನ.16ರ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ, ಮಿತ್ತಬಾಗಿಲು ಪರಿಸರದಲ್ಲಿ ನದಿ ಪಾತ್ರಗಳು ಏಕಾಏಕಿ ಉಕ್ಕಿ ಹರಿದಿವೆ.
2 ಗಂಟೆಯಿಂದ ಭಾರಿ ಮಳೆಯಾದ ಪರಿಣಾಮ ರಾಷ್ಟ್ರೀಯ ಉದ್ಯಾನವನದಂಚಿನ ಬಂಡಾಜೆ ಅರ್ಬಿ ಫಾಲ್ಸ್ನಲ್ಲಿ ಮಣ್ಣುಮಿಶ್ರಿತ ನೀರು ಧುಮ್ಮಿಕ್ಕಿ ಹರಿದ ಪರಿಣಾಮ ಗುಡ್ಡ ಪ್ರದೇಶ ಕುಸಿದಂತೆ ಭಾಸವಾಗಿತ್ತು.
ಭಾರಿ ಮಳೆಯ ಪರಿಣಾಮ ದಿಡುಪೆ ಪರಿಸರವಾಗಿ ಹರಿಯುವ ನಂದಿಕಾಡು ಹೊಳೆ, ಆನಡ್ಕ, ನೇತ್ರಾವತಿ ನದಿ, ಕರಿಯಂದೂರು ಹೊಳೆ, ಕುಕ್ಕಾವು ಹೊಳೆಗಳಲ್ಲಿ ನೀರು ಏಕಾಏಕಿ ಹರಿದಿದ್ದು, ಅಂಗಳದಲ್ಲಿ ರಾಶಿ ಹಾಕಿದ ಅಡಿಕೆಗಳು ಕೊಚ್ಚಿಹೋಗಿವೆ. ಅಲ್ಲದೇ, ತೋಟ, ಗದ್ದೆಗಳಿಗೂ ನೀರು ನುಗ್ಗಿದ್ದು, ಅಡಿಕೆ ಮರದ ಕಾಲು ಸಂಕವೂ ಕೊಚ್ಚಿಹೋಗುವ ಮಟ್ಟಿಗೆ ನೀರು ನುಗ್ಗಿತ್ತು.
ನೇತ್ರಾವತಿ ನದಿಯ ಕೊಪ್ಪದಗಂಡಿ ಕಿರುಸೇತುವೆ ಜಲಾವೃತವಾಗಿತ್ತು. ನೆರಿಯಾ ಪ್ರದೇಶಗಳಲ್ಲಿಯೂ ನಿರಂತರ ಮಳೆಯಾಗಿದೆ. ಆದರೆ, ಬೆಳ್ತಂಗಡಿ ಇತರೆ ಕಡೆ ಭಾರಿ ಮಳೆ ಕಂಡುಬಂದಿಲ್ಲ.
ಭಾರಿ ಮಳೆಯ ಪರಿಣಾಮ ಮಲವಂತಿಗೆ ಗ್ರಾಮದಿಂದ ದಿಡುಪೆಯಾಗಿ-ಎಳನೀರು ಸಾಗುವ ಮಣ್ಣಿನ ರಸ್ತೆಗೆ ಹಾನಿಯಾಗಿದೆ. ಈ ವರ್ಷ ಎಳನೀರು ಭಾಗದಲ್ಲಿ ಎಲೆಚುಕ್ಕಿ ಹಾಗೂ ಮಳೆಯ ಪರಿಣಾಮದಿಂದ ಅಡಿಕೆ ಕೃಷಿ ಹಾನಿಯಾದರೆ, ಇನ್ನೊಂದೆಡೆ ಕಾಫಿ ಹಣ್ಣು ಕೊಯ್ಯಲಾಗದೆ, ಹಣ್ಣಾದ ಕಾಫಿ ಒಳಗಿಸಲು ಸಾಧ್ಯವಾಗಿಲ್ಲ. ಅಲ್ಲದೇ, ಭತ್ತ ಕೃಷಿಯೂ ನಾಶವಾಗಿದೆ.