ಮಂಗಳೂರು, ನ. 16 (DaijiworldNews/SM): ಎಲ್ಲಾ ಪಕ್ಷದವರಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ನಾನು ಏನು ಎಂದು ತೋರಿಸಿಕೊಡುತ್ತೇನೆ ಎಂಬುವುದಾಗಿ ಸಹಕಾರಿ ಕ್ಷೇತ್ರದ ಸಾಧಕ, ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ತಮ್ಮ ಚುನಾವಣಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಬಡಜನರು, ಮಹಿಳೆಯರ ಅಭಿವೃದ್ಧಿ, ಸ್ವಾವಲಂಬಿ ಜೀವನಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಮಹತ್ವದ್ದಾಗಿದೆ. ಇದರ ಆಧಾರದಲ್ಲಿ ಮೇಲ್ಮನೆಯಲ್ಲಿ ಸಹಕಾರ ಕ್ಷೇತ್ರಕ್ಕೊಂದು ಸ್ಥಾನ ಮೀಸಲಿಡಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸಿಕೊಂಡು ಬಂದಿದೆ. ಆದರೆ, ಈ ಪ್ರತಿಪಾದನೆಗೆ ಯಾರೂ ಮನ್ನಣೆ ನೀಡಿಲ್ಲ ಎಂದರು.
ಇದೇ ಕಾರಣದಿಂದಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರ ಒತ್ತಾಯದ ಮೇರೆಗೆ ಈ ಬಾರಿಯ ಪರಿಷತ್ ಚುನಾವಣೆ ಕಣಕ್ಕಿಳಿದಿದ್ದೇನೆ. ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಒತ್ತಡ ಬರುತ್ತಿದೆ. ನಾನು ಯಾವುದಕ್ಕೂ ಮಣಿಯಲಾರೆ. ಮತದಾರರು ಸಹಕಾರಿ ಕ್ಷೇತ್ರಕ್ಕೊಂದು ಅವಕಾಶ ನೀಡಬೇಕು ಎಂದು ಡಾ.ಎನ್.ಎಂ. ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.