ಕಾರ್ಕಳ, ನ. 15 (DaijiworldNews/SM): ಬೈಲೂರು ಸಮೀಪದ ನೀರೆ ಎಂಬಲ್ಲಿ ಸೋಮವಾರ ಸಂಜೆ 4 ಗಂಟಗೆಯ ವೇಳೆಗೆ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ವ್ಯಕ್ತಿ ದಾರುಣ ರೀತಿಯಲ್ಲಿ ಮೃತ ಪಟ್ಟಿದ್ದಾರೆ. ನೀರೆ ರಾಜೀವ ನಗರದ ವಾದಿರಾಜ ಆಚಾರ್ಯ(60) ಮೃತಪಟ್ಟವರು.
ಸಿಡಿಲಿನ ಅಬ್ಬರಕ್ಕೆ ಮನೆಯ ವಿದ್ಯುತ್ ಪರಿಕರಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಮನೆಗೂ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಅಲ್ಲದೆ, ಈ ಮನೆಯ ಪರಿಸರದಲ್ಲಿ ಇದ್ದ ಹಲವು ಮನೆಗಳಿಗೂ ಹಾನಿ ಸಂಭವಿಸಿದೆ. ಇನ್ನು ಸಿಡಿಲಾಘಾತಕ್ಕೆ ಕುಸಿದು ಬಿದ್ದ ವಾದಿರಾಜರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅದಾಗಲೇ ಅವರು ಪ್ರಾಣ ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.
ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಘಟನಾ ಸ್ಥಳಕ್ಕೆ ಕಾರ್ಕಳ ಪ್ರಭಾರ ತಹಶೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಶಿವಪ್ರಸಾದ್ ಭಟ್ ಇನ್ನಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.