ಕಾರ್ಕಳ, ನ.15 (DaijiworldNews/PY): "ಪ್ರಾಥಮಿಕ ಶಿಕ್ಷಣವು ಮಾತೃಭಾಷೆ ಕನ್ನಡದಲ್ಲಿಯೇ ಇರಬೇಕು. ಅದು ಅವರ ವ್ಯಕ್ತತ್ವ ವಿಕಾಸನಕ್ಕೆ ಪೂರಕವಾಗಿರುತ್ತದೆ. ಮಕ್ಕಳೆಂದರೆ ನಮ್ಮ ಭವಿಷ್ಯ ಅವರ ಆಸಕ್ತಿಗನುಗುಣವಾಗಿ ಅವರನ್ನು ನಾವು ಬೆಳೆಸುವುದು ನಮ್ಮ ಕರ್ತವ್ಯ" ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ರಾಮಮಂದಿರದಲ್ಲಿ ಆದಿಗ್ರಾಮೋತ್ಸವ ವೇದಿಕೆಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಉಡುಪಿ ಜಿಲ್ಲಾ ಪತ್ರಕರ್ತರ ವೇದಿಕೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಕಾರ್ಯಕ್ರಮದಲ್ಲಿ 30 ಮಂದಿ ವಿಶೇಷ ಸಾಧಕ ಮಕ್ಕಳಿಗೆ ರಾಜ್ಯಮಟ್ಟದ ಗೌರವ ಪ್ರದಾನಿಸಿ ಮಾತನಾಡುತ್ತಿದ್ದರು.
"ಡಾ. ಶೇಖರ ಅಜೆಕಾರು ಅವರು ಕನ್ನಡ-ತುಳು ಭಾಷೆ, ನಾಡು ನುಡಿಯ ಸೇವೆಗಾಗಿ ಬದುಕನ್ನು ಮುಡುಪಾಗಿಸಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಯುವಕರ ಪ್ರತಿಭೆಗಳನ್ನು ಸಕಾಲಿಕವಾಗಿ ಸರಕಾರಗಳು ಗುರುತಿಸುವ ಮೊದಲೇ ಗುರುತಿಸುತ್ತಾ ಬಂದಿದ್ದಾರೆ" ಎಂದ ಅವರು ಪುರಷ್ಕೃತ ಮಕ್ಕಳನ್ನು ಅಭಿನಂದಿಸಿದರು.
ಮಕ್ಕಳ ದಿನಾಚರಣೆಯ ಈ ಕಾರ್ಯಕ್ರಮವನ್ನು ಯುವ ಜಾದುಗಾರ ಪ್ರಥಮ್ ಕಾಮತ್ ಕಟಪಾಡಿ ಅವರು ಪುನರೂರು ಅವರ ಭಾವಚಿತ್ರವನ್ನು ಜಾದು ಮೂಲಕ ಅನಾವರಣಗೊಳಿಸಿ ಉದ್ಘಾಟಿಸಿದರು.
ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, "ಮಕ್ಕಳೆಂದರೆ ಪ್ರಶ್ನೆ, ಕೌತುಕ, ಕ್ರಿಯಾಶೀಲತೆ, ನಿಗೂಢತೆ, ಸೃಜನಶೀಲತೆಯಾಗಿದೆ. ಅವರಲ್ಲಿ ಪ್ರತಿಕ್ಷಣ ಹೊಸ ತನವನ್ನು ಹುಡುಕಾಡುತ್ತಿರುತ್ತದೆ. ಮಕ್ಕಳ ಬೇಕು ಬೇಡಗಳನ್ನು ಅರಿತುಕೊಂಡು ಅವರಿಗೆ ಪ್ರೋತ್ಸಾಹ ನೀಡುವುದರ ಬದಲಿಗೆ ಅವರ ಮೇಲೆ ಹೆತ್ತವರು ತಮ್ಮ ಆಸೆಗಳ ಒತ್ತಡ ಹೇರುತ್ತಿರುವುದು ವಿಷಾದನೀಯ" ಎಂದು ಪ್ರಧಾನ ಅತಿಥಿಗಳಾಗಿದ್ದ ಹೇಳಿದರು.
ಕೃಷಿ ಬಿಂಬ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ತೋಡಿಕಾನ ಅಧ್ಯಕ್ಷತೆ ವಹಿಸಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಉಪಾಧ್ಯಕ್ಷ ಪ್ರೇಮನಾಥ ಮಾರ್ಲ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್. ಬಿ. ಜಗದೀಶ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಷೆ ಮಿತ್ರಪ್ರಭ ಹೆಗ್ಡೆ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬೊಮ್ಮರಬೆಟ್ಟು ಎ.ನರಸಿಂಹ, ಲೇಖಕ ಸುಧೀರ್ ಸಾಗರ್, ಬೆಳದಿಂಗಳ ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಅಜೆಕಾರು ಅತಿಥಿಗಳಾಗಿದ್ದರು.
ಉಡುಪಿ ವಿಶ್ವನಾಥ ಶೆಣೈ ಮತ್ತು ದಿನೇಶ ಹೊಸಂಗಡಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಮಂದಿರದ ಗಣೇಶ್ ಹೆಗ್ಡೆ, ಸಮಿತಿಯ ಪದಾಧಿಕಾರಿಗಳಾದ ಎಣ್ಣೆಹೊಳೆ ಸಂತೋಷ ಜೈನ್, ಜಯಂತ್ ಕೋಟ್ಯಾನ್, ನಾಗೇಶ ಕಾಮತ್ ಕಟಪಾಡಿ, ಶಶಿ ಜಯಂತ್, ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಾಯಕ ಸ್ಕಂದ ಉಪಸ್ಥಿತರಿದ್ದರು.
ಕವಯತ್ರಿ ಅವನಿ ಉಪಾಧ್ಯಾ ನಿರೂಪಿಸಿದರು. ಸಂಘಟಕ ಡಾ. ಶೇಖರ ಅಜೆಕಾರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಸೌಮ್ಯಶ್ರೀ ವಂದಿಸಿದರು.