ಮಂಗಳೂರು, ನ.15 (DaijiworldNews/HR): ಕರಾವಳಿಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಅನೇಕ ಕಡೆ ಕೃಷಿಗೆ ಹಾನಿಯಾಗಿದೆ. ಹವಾಮಾನ ಇಲಾಖೆಯು ಇಂದು ರಾಜ್ಯದ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ಬೆಳಗ್ಗಿನಿಂದಲೇ ಮಳೆ ಆರಂಭವಾಗಿದ್ದು, ದಿನವಿಡೀ ಮಳೆ ಬಂದಿದೆ. ಒಮ್ಮೆ ಧಾರಾಕಾರ ಹಾಗೂ ಕೆಲವೊಮ್ಮೆ ಜಿಟಿ ಜಿಟಿ ಮಳೆ ಸುರಿದಿದೆ. ಇದರಿಂದ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಇನ್ನು ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲೂ ಭಾರೀ ಮಳೆಯಾಗಿದ್ದು, ಇತ್ತ ಸಂಪಾಜೆ ಭಾಗದಲ್ಲಿ ಸುರಿದ ಭಾರೀ ಮಳೆಗೆ ಗೂನಡ್ಕ ದರ್ಕಸ್ ರಸ್ತೆ ತಿರುಗುವಲ್ಲಿ ರಾಷ್ಟ್ರೀಯ ಹೆದ್ದಾರಿ ಮೋರಿ ಬ್ಲಾಕ್ ಆಗಿದೆ.
ಅನೇಕ ಕಡೆಗಳಲ್ಲಿ ಸಿಡಿಲು ಮಿಂಚಿನಿಂದ ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅಳದಂಗಡಿ ನಾವರದಲ್ಲಿ ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದ್ದು, 1.15 ಲಕ್ಷ ರೂ.ಗೂ ಅಧಿಕ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅಕಾಲಿಕ ಮಳೆಯಿಂದಾಗಿ ದ.ಕ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಭತ್ತದ ಕೃಷಿಗೆ ಹಾನಿಯಾಗಿದ್ದು, ಗದ್ದೆಗಳಲ್ಲಿ ನೀರು ನಿಂತು ಕಟಾವಿಗೆ ಸಿದ್ದವಾಗಿದ್ದ ಭತ್ತದ ಪೈರು ಹಾಳಾಗಿದೆ. ತರಕಾರಿ ಕೃಷಿಗೂ ಹಾನಿ ಉಂಟಾಗಿದೆ.