ಕಾರ್ಕಳ, ನ.14 (DaijiworldNews/HR): ಮತಾಂತರ ಮತ್ತು ಲವ್ಜಿಹಾದ್ ನಿಯಂತ್ರಣಕ್ಕೆ ವಿಶೇಷ ಕಾನೂನು ತರುವ ತರುವ ಚಿಂತನೆಗಳು ಸರಕಾರ ಅರಿವಿನಲ್ಲಿದೆ. ಮುಂದಿನ ಅಧಿವೇಶನ ಅಥವಾ ಜನವರಿಯ ಅಧಿವೇಶನದಲ್ಲಿ ತರಬೇಕೋ ಎನ್ನುವ ಬಗ್ಗೆ ಉನ್ನತ ಮಟ್ಟದಲ್ಲಿ ಚಿಂತನೆಗಳು ನಡೆಯುತ್ತಿವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾರ್ಕಳ ಡಿ.12ರಂದು ಕಾರ್ಕಳದಲ್ಲಿ ನಡೆಯಲಿರುವ ಹಿಂದೂ ಸಂಗಮ ಬ್ರಹತ್ ಶೋಭಯಾತ್ರೆಯ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದ ಅವರು, "ರಾಜ್ಯದಲ್ಲೂ ಕೂಡ ಮತಾಂತರ ನಿಷೇಧ, ಲವ್ಜಿಹಾದ್ ನಿಯಂತ್ರಣ ಕುರಿತು ವಿಶೇಷ ಕಾನೂನನ್ನು ತರಬೇಕಿದೆ. ರಾಜ್ಯ ಸರಕಾರ ಖಂಡಿತವಾಗಿ ಇದನ್ನು ಮಾಡುವುದಿದೆ" ಎಂದರು.
"ಹಿಂದೂಗಳ ಜಾಗೃತಿ, ಸಂಸ್ಕೃತಿಯ ವೈಭವೀಕರಣ ಆಗಬೇಕು. ಅದು ತಾಲೂಕು ಜಿಲ್ಲೆಗಳಲ್ಲಿ ನಡೆಯಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಹೀಮದೂ ಪರ ಸರಕಾರ ಆಡಳಿತದಲ್ಲಿದೆ ಎನ್ನುವುದನ್ನು ಗೋಹತ್ಯೆ, ಲಜಿಹಾದ್, ಮತಾಂತರ ಈ ಚಟುವಟಿಕೆ ನಡೆಸುತ್ತಿರುವ ರಾಷ್ಟ್ರದ್ರೋಹಿಗಳು ತಿಳಿದಿರಬೇಕು. ಇವುಗಳನ್ನು ಸರಕಾರ ಯಾವ ಕಾರಣಕ್ಕೂ ಸಹಿಸುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.
"ಜಗತ್ತಿನ ಬೆಳವಣಿಗೆ ಗಮನಿಸಿದರೆ ಹಿಂದೂ ಸಂಘಟನೆ, ಚಳುವಳಿಗಳು ಅನಿವಾರ್ಯ. ಅಫ್ಘಾನಿಸ್ಥಾನದ ಘಟನೆಗಳು ಇದಕ್ಕೆ ಸಾಕ್ಷಿ. ಹಿಂದೂ ವಿಚಾರ ಪದ್ಧತಿ ಎಲ್ಲಿ ದೂರ ಆಗುತ್ತಿದೆಯೋ ಅಲ್ಲಿ ಶಾಂತಿ, ಸಂಸ್ಕೃತಿ, ನೆಮ್ಮದಿಯಿರಲು ಸಾಧ್ಯವಿಲ್ಲ. ದತ್ತ ಜಯಂತಿ ಹೆಸರಿನಲ್ಲಿ ಹಿಂದೂ ಸಂಗಮ ರಾಜ್ಯಾದ್ಯಂತ ನಡೆಯಬೇಕು ಎನ್ನುವುದು ಸಂಘಟನೆಯ ಆಶಯವೂ ಕೂಡ ಎಂದರು.
ಕರ್ನಾಟಕ ಕ್ವಾರಿ ಅಸೊಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಭಜರಂಗದಳದ ರಾಜ್ಯ ಸಂಚಲಕ ಸುನಿಲ್ ಕೆ.ಆರ್ ಇವರುಗಳು ಹಿಂದೂ ಸಂಘಟನೆ ಒಗ್ಗೂಡುವಿಕೆ ಅಗತ್ಯತೆ ಕುರಿತು ಮಾತನಾಡಿದರು. ಸಂಘದ ಹಿರಿಯರಾದ ಸುರೇಂದ್ರ ಶೆಣೈ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಸ್ಥಿತರಿದ್ದರು. ಸಂಘಟನೆಯ ಚೇತನ್ ಪೇರಲ್ಕೆ ಸ್ವಾಗತಿಸಿ, ಅಶೋಕ್ ಜೈನ್ ವಂದಿಸಿದರು. ಸುರಕ್ಷ ನಿರೂಪಿಸಿದರು.