ಉಡುಪಿ, ನ.14 (DaijiworldNews/HR): ಪ್ರತಿ ವರ್ಷ ನವೆಂಬರ್ 14ನ್ನು ವಿಶ್ವದಾದ್ಯಂತ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದ್ದು, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಇಂದು ಕಸ್ತೂರಬಾ ಆಸ್ಪತ್ರೆ ಮಣಿಪಾಲದಿಂದ ಅಜ್ಜರಕಾಡು ಕ್ರೀಡಾಂಗಣದವರೆಗೆ ಸೈಕಲ್ ಜಾಥ ಕಾರ್ಯಕ್ರಮ ನಡೆಯಿತು.
ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಒಪಿಡಿ ಮುಂಭಾಗದಲ್ಲಿ ನಡೆದ ಸೈಕಲ್ ಜಾಥ ಕಾರ್ಯಕ್ರಮಕ್ಕೆ ಮಾಹೆ ಮಣಿಪಾಲ ಇದರ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಚಾಲನೆ ನೀಡಿ ಸಿಂಡಿಕೇಟ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಅಂಬಲಪಾಡಿ, ಬ್ರಹ್ಮಗಿರಿ ಮೂಲಕ ಅಜ್ಜರಕಾಡು ಕ್ರೀಡಾಂಗಣದಲ್ಲಿ ಸಮಾಪನಗೊಂಡಿದ್ದು, ಸೈಕಲ್ ಜಾಥದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ನವೆಂಬರ್ 15 ರಿಂದ 19 ರವರೆಗೆ ಮಧುಮೇಹ ರೋಗಿಗಳಿಗೆ ಉಚಿತ ಕಾಲು ತಪಾಸಣೆಯನ್ನು ಡಾ ಅರುಣ್ ಮೈಯಾ ಘೋಷಿಸಿದ್ದು, "ಮಧುಮೇಹ ರೋಗಿಗಳಿಗೆ ಪಾದದ ತಪಾಸಣೆ ಕೂಡ ಬಹಳ ಮುಖ್ಯವಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ಮಧುಮೇಹ ಪಾದದ ಆರಂಭಿಕ ತಪಾಸಣೆ, ಮೌಲ್ಯಮಾಪನ, ಮತ್ತು ನಿರ್ವಹಣೆ, ಈ ವರ್ಷ, ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನಾ ಕೇಂದ್ರವು ನವೆಂಬರ್ 15 ರಿಂದ 19 ರವರೆಗೆ ಮಧುಮೇಹ ಹೊಂದಿರುವ ಜನರಿಗೆ ಉಚಿತ ಕಾಲು ತಪಾಸಣೆ ನಡೆಯಲಿದೆ" ಎಂದರು.
ಮಾಹೆ ಮಣಿಪಾಲದ ಡಾ.ಎಚ್.ಎಸ್.ಬಲ್ಲಾಳ್ ಮುಖ್ಯ ಅತಿಥಿಯಾಗಿದ್ದು, ಮಾಹೆ ಮಣಿಪಾಲದ ಪ್ರೊ ಉಪಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್, ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಡೀನ್ ಡಾ.ಅರುಣ್ ಮಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ಗೌರವ ಅತಿಥಿಗಳಾಗಿದ್ದರು. ಕೆಎಂಸಿಯ ಡೀನ್ ಡಾ.ಶರತ್ ಕೆ.ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಜಿ.ಮುತ್ಯಾನ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಅಂತಃಸ್ರಾವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ.ಸಹನಾ ಶೆಟ್ಟಿ ಉಪಸ್ಥಿತರಿದ್ದರು.