ಕಾರ್ಕಳ, ನ.14 (DaijiworldNews/HR): ಮುಂಡ್ಲಿ ಪಂಪ್ಹೌಸ್ನಲ್ಲಿ ಲಕ್ಷಾಂತರ ಬೆಲೆಬಾಳುವ ಸೊತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಬಂಗಲೆ ಸಮೀಪದ ನಿವಾಸಿ ಅನಿಲ್ಭಂಡಾರಿ(30) ಎಂಬಾತನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮುಂಡ್ಲಿ ಪಂಪ್ಹೌಸ್
ದುರ್ಗಾ ಗ್ರಾಮದ ಬಲ್ಮಗುಂಡಿಯಲ್ಲಿ ನಿರ್ಮಿಸಿರುವ ಮುಂಡ್ಲಿ ಡ್ಯಾಂನಲ್ಲಿ ಜಾಕ್ವೆಲ್ಗೆ ನೀರು ಒದಗಿಸುವ ಎಂಎಸ್ ಗೇಟ್ಗಳು ಹಾಗೂ ಪಂಪ್ಹೌಸ್ನ ತಳಭಾಗದಲ್ಲಿ ದಾಸ್ತಾನು ಕೊಠಡಿಯಲ್ಲಿ ಶೇಖರಿಸಲ್ಪಟ್ಟ ಒಟ್ಟು 160 ಸಂಖ್ಯೆಯ ಎಂಎಸ್ ಗೇಟ್ಗಳು ಹಾಗೂ ಜಾಕ್ವೆಲ್ಗೆ ಅಳವಡಿಸಿದ 3 ಸೋಲಾರ್ ದೀಪಗಳ ಬ್ಯಾಟರಿಗಳನ್ನು ಕಳವುಗೈದಿರುವ ಘಟನೆಗೆ ಸಂಬಂಧಿಸಿದಂತೆ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು.
ಕಳವು ಆಗಿರುವ ಸೊತ್ತುಗಳ ಒಟ್ಟು ಮೊತ್ತ ರೂ.4.95 ಲಕ್ಷ ಆಗಿದ್ದು, ಕಳೆದ 15 ವರ್ಷಗಳಿಂದ ಪುರಸಭೆಯಲ್ಲಿ ಕನಿಷ್ಠ ವೇತನ ಯೋಜನೆಯಡಿ ತಾತ್ಕಾಲಿಕವಾಗಿ ನಿಯುಕ್ತಿಗೊಂಡಿರುವ ಅನಿಲ್ ಭಂಡಾರಿ ಈ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯನ್ವಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳದ ಗುಜುರಿ ಮಾಲಕನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿರುವ ಸಾಧ್ಯತೆಗಳಿರುವುದರಿಂದ ಅವರ ಬಂಧನದ ಸಾಧ್ಯತೆಗಳಿವೆ.