ಮಂಗಳೂರು, ನ.14 (DaijiworldNews/PY): ಭಾರತ ಸೇವಾದಳ ವತಿಯಿಂದ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಜನ್ಮದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಭಾನುವಾರ ನಗರದ ಕಾರ್ಪೋರೇಶನ್ ಬ್ಯಾಂಕ್ ಕೇಂದ್ರ ಕಚೇರಿ ಎದುರುಗಡೆ ಇರುವ ನೆಹರೂ ಪ್ರತಿಮೆ ಬಳಿ ಆಚರಿಸಲಾಯಿತು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ, "ನೆಹರೂರವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದರು. ಸುಮಾರು 10 ವರ್ಷಗಳ ಕಾಲ ಸೆರೆಮನೆ ಶಿಕ್ಷೆ ಅನುಭವಿಸಿದ್ದರು. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಅವರು ಅನೇಕ ಯೋಜನೆಗಳನ್ನು ಹುಟ್ಟುಹಾಕಿ ದೇಶದ ಅಭಿವೃದ್ಧಿಗೆ ಪಂಚಾಗ ಹಾಕಿದ್ದರು. ಅವರು ದೇಶಕ್ಕೋಸ್ಕರ ಮಾಡಿದ ಸೇವೆಯನ್ನು ನಾವೆಲ್ಲರೂ ಸ್ಮರಿಸಿಕೊಂಡು, ಅವರ ತತ್ವ, ಸಿದ್ಧಾಂತಗಳನ್ನು ಅನುಸರಿಸೋಣ" ಎಂದು ಕರೆಯಿತ್ತರು.
ಕಾರ್ಯಕ್ರಮದಲ್ಲಿ ಸೇವಾದಳ ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸಂಘಟಕ ಮಂಜೇಗೌಡ, ಉದಯ್ ಕುಂದರ್, ಪ್ರೇಮ್ ಚಂದ್, ಕೃತಿನ್ ಕುಮಾರ್, ಸುನೀಲ್ ದೇವಾಡಿಗ, ಶಾಲಾ ಶಿಕ್ಷಕಿಯರಾದ ಸುಮಾ, ಪಾವನ ಉಪಸ್ಥಿತರಿದ್ದರು.
ನಗರದ ಬೆಂಗರೆ ಸ್ಯಾಂಡ್ ಪಿಟ್ ಶಾಲೆ ಮತ್ತು ಕಾಪಿಕಾಡ್ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.