ಉಳ್ಳಾಲ, ನ.13 (DaijiworldNews/HR): ಭಾರತದ ಆರೋಗ್ಯ ಕ್ಷೇತ್ರ ಉತ್ತಮ ಸಾಧನೆಯ ಪಥದಲ್ಲಿದ್ದು, ಇಲ್ಲಿನ ವೈದ್ಯರು, ದಾದಿಯರು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದಾಗಿದೆ ಎಂದು ಭಾರತ ಸರಕಾರದ ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಡೈರೆಕ್ಟರ್ ಡಾ. ಬಲರಾಂ ಭಾರ್ಗವ ಹೇಳಿದರು.
ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ 11ನೇ ಘಟಿಕೋತ್ಸವದಲ್ಲಿ ಪ್ರಮುಖ ಭಾಷಣ ಮಾಡಿದ ಅವರು, "ಬಾಹ್ಯಾಕಾಶ ಸಂಶೋಧನೆ, ಸಶಸ್ತ್ರ ಪಡೆ, ಮೊಬೈಲ್, ಪರಮಾಣು ಶಕ್ತಿಗಳ ತಂತ್ರಜ್ಞಾನದಲ್ಲಿ ಭಾರತ ಅಂತರಾಷ್ಟ್ರೀಯವಾಗಿ ಮುಂಚೂಣಿಯಲ್ಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದ ಸಂದರ್ಭ ಆಹಾರದ ಕೊರತೆಯುಂಟಾಗಿತ್ತು. ಅವೆಲ್ಲವನ್ನು ಮೆಟ್ಟಿ ನಿಂತ ದೇಶ ಹಸಿರು ಕ್ರಾಂತಿ ಮೂಲಕ ವಿಶ್ವಕ್ಕೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡುವಂತಹ ದೇಶವಾಗಿ ಹೊರಹೊಮ್ಮಿದೆ. ಭಾರತೀಯ ಶಕ್ತಿ, ಮನಸ್ಸು ಹಾಗೂ ಮೆದುಳಿನಿಂದ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆದು ಶೇ.60 ಭಾಗ ಜೆನೆರಿಕ್ ಔಷಧಿಗಳನ್ನು ವಿತರಿಸಲು ಸಾಧ್ಯವಾಗಿದೆ. ಆರೋಗ್ಯ, ಶಿಕ್ಷಣ ಹಾಗೂ ಆವಿಷ್ಕಾರಗಳಿಗೆ ಭಾರತ ಒಂದು ಕೇಂದ್ರವಾಗಿದೆ. ಸಮಯಪ್ರಜ್ಞೆ, ಸಮಗ್ರತೆ ಮತ್ತು ವೃತ್ತಿಪರ ಸಾಮಥ್ರ್ಯದಿಂದ ಸಮಾಜಕ್ಕೆ ಕೊಡುಗೆಯನ್ನು ನೀಡುವ ಮೂಲಕ ಅಶಕ್ತರನ್ನು ಬಲಿಷ್ಠ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಯುವಸಮಾಜಕ್ಕಿದೆ. ಪರಿಸರ ವ್ಯವಸ್ಥೆ ನಾಶಪಡಿಸಿದ ಹಿನ್ನೆಲೆಯಲ್ಲಿ ವೈರಾಣುಗಳು ಉತ್ಪತ್ತಿಯಾಗುತ್ತಿದೆ. ಮನುಷ್ಯನಿರುವಲ್ಲಿಗೆ ಪ್ರಾಣಿ, ಪಕ್ಷಿಗಳು ಬಂದಾಗ ವೈರಾಣುಗಳ ಹರಡುವಿಕೆ ಸಹಜವಾಗಿದೆ. ನಿಫಾ, ಝಿಕಾ ಪ್ರಾಣಿಗಳಿಂದ ಬಂದಿರುವ ವೈರಾಣುವೆಂದು ಸಾಬೀತಾಗಿದ್ದರೆ, ಇದೀಗ ಕೋವಿಡ್ -19 ಕೂಡಾ ಪ್ರಾಣಿಗಳಿಂದ ಹರಡಿರುವ ವೈರಾಣು ಅನ್ನುವ ಸಂಶೋಧನೆ ನಡೆದಿವೆ" ಎಂದರು.
ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಘಟಿಕೋತ್ಸವ ಸಮಾರಂಭ ಹೆತ್ತವರು, ಶಿಕ್ಷಕರು ಹಾಗೂ ವಿದ್ಯೆ ನೀಡಿರುವ ಸಂಸ್ಥೆಗೆ ಧನ್ಯವಾದ ಸಮರ್ಪಿಸುವ ದಿನ ಎಂದಿದ್ದಾರೆ.
ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಘಟಿಕೋತ್ಸವ ನಡೆಸಿಕೊಟ್ಟು, ನಿಟ್ಟೆ ವಿ.ವಿ ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ. 100 ಎಕರೆ ಪ್ರದೇಶದಲ್ಲಿ ನೂತನ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ಸಂಸ್ಥೆ ಅಂತರಾಷ್ಟ್ರೀಯ ವಾಗಿ ಮಾನ್ಯತೆ ಪಡೆಯಲು ಸಿಬ್ಬಂದಿ ಶಿಸ್ತು ಹಾಗೂ ಗುಣಮಟ್ಟ ಕಾಯುವಿಕೆಯಿಂದ ಸಾಧ್ಯವಾಗಿದೆ ಎಂದರು.
ಈ ಸಂದರ್ಭ ಆಡಳಿತ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ಸಹ ಕುಲಪತಿ ಎಂ.ಎಸ್. ಮೂಡಿತ್ತಾಯ, ಕುಲಸಚಿವರಾದ ಡಾ. ಅಲ್ಕಾ ಕುಲಕರ್ಣಿ, ಪರೀಕ್ಷಾಂಗ ಕುಲಸಚಿವ ಡಾ. ಪ್ರಸಾದ್ ಬಿ. ಶೆಟ್ಟಿ, ರಾಜೇಂದ್ರ , ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್, ಡಾ. ಯು.ಎಸ್. ಕೃಷ್ಣ ನಾಯಕ್ , ಡಾ.ಸಿ.ಎಸ್. ಶಾಸ್ತ್ರಿ, ಡಾ. ಧಾನೇಶ್, ಡಾ. ಅನಿರ್ಬಾನ್ ಚಕ್ರವರ್ತಿ, ರವಿರಾಜ್, ಡಾ. ವಿನೋದ್ ಉಪಸ್ಥಿತರಿದ್ದರು.