ಕಾರ್ಕಳ, ನ.13 (DaijiworldNews/HR): 14 ವರ್ಷಗಳಿಂದ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳ್ಳಿಬ್ಬರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹಾಸನ ಹೊಳೆನರಸಿಂಹಪುರ ಕಲ್ಲೇನಹಳ್ಳಿಯ ಮಂಜು ಆಲಿಯಾಸ್ ಮಂಜುನಾಥ, ವಸಂತ ಬಂಧಿತ ಆರೋಪಿತರು.
ಕುಕ್ಕುಂದೂರು ಹಾರ್ಜಡ್ಡುನಲ್ಲಿ ವಾಸವಾಗಿದ್ದ ಹಾಸನ ಮೂಲದ ವೆಂಕಟೇಶ ಎಂಬವರನ್ನು ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್ ಆಫೀಸ್ ಬಳಿ ಆರೋಪಿಗಳಾದ ಹೊಳೆನರಸಿಂಹಪುರ ಕಲ್ಲೇನಹಳ್ಳಿಯ ಯೋಗೀಶ ಅಲಿಯಾಸ್ ಎನ್ ಹೆಚ್, ಮಂಜು ಆಲಿಯಾಸ್ ಮಂಜುನಾಥ, ವಸಂತ ಎಂಬವರು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಆರೋಪಿ ಯೋಗೀಶನ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.
ಆ ಸಂದರ್ಭದಲ್ಲಿ ವೆಂಕಟೇಶನ ಪತ್ನಿ ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆರೋಪಿ ಯೋಗೀಶ್ನನ್ನು ಬಂಧಿಸಿದ್ದರು. ಉಳಿದ ಇಬ್ಬರು ಆರೋಪಿಗಳಾದ ಮಂಜು ಅಲಿಯಾಸ್ ಮಂಜುನಾಥ, ವಸಂತ ಪ್ರಕರಣ ದಾಖಲಾದ ದಿನದಿಂದ ಅರೆಸ್ಟ್ ಆಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಆರೋಪಿಗಳ ದಸ್ತಗಿರಿಗೆ ಎಲ್ ಪಿ ಸಿ ವಾರಂಟ್ ಹೊರಡಿಸಿದ್ದರು.
ಇನ್ನು ಅಪಹರಣಕ್ಕೆ ಒಳಗಾದ ವೆಂಕಟೇಶ್ನವರ ಮಗ ಧರ್ಮ ಎಂಬವರು ಪ್ರಕರಣದ ಆರೋಪಿತ ವಂಸತ ಎಂಬವರ ಕಲ್ಲಿನ ಕ್ವಾರೇಯಲ್ಲಿ ದುಡಿಯುತ್ತಿದ್ದ ಆ ಸಂದರ್ಭದಲ್ಲಿ ಮುಂಗಡವಾಗಿ ರೂ. 70 ಸಾವಿರ ಹಣವನ್ನು ಪಡೆದು ಕ್ವಾರೇಯಲ್ಲಿ ದುಡಿಯದೇ ಕಾರ್ಕಳಕ್ಕೆ ಹಿಂತಿರುಗಿದ್ದರು. ಆ ವೇಳೆಗೆ ವಿಳಾಸ ಪಡೆದ ಆರೋಪಿಗಳು ಧರ್ಮನನ್ನು ಹುಡುಕಿ ಆತನ ಮನೆಗೆ ಬಂದಿದ್ದರು. ಮನೆಯಲ್ಲಿ ಧರ್ಮ ಇಲ್ಲದೇ ಹೋದುದರಿಂದ ಆತನ ತಂದೆ ವೆಂಕಟೇಶ ರಸ್ತೆಯಲ್ಲಿ ಎದುರುಗೊಂಡಿದ್ದು, ಆತನನ್ನೇ ಅಪಹರಿಸಿ ಹಿಂಸಿಸಿದರೆಂದು ಪೊಲೀಸರ ತನಿಖೆ ವೇಳೆಗೆ ತಿಳಿದುಬಂದಿತ್ತು.
ಕಾರ್ಕಳ ಉಪ-ವಿಭಾಗದ ಡಿ ವೈ ಎಸ್ ಪಿ ವಿಜಯಪ್ರಸಾದ್, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ರವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪಿ ಎಸ್ ಐ ಮಧು ಬಿ ಇ ರವರ ಆದೇಶದಂತೆ ಠಾಣಾ ಎ ಎಸ್ ಐ ರಾಜೇಶ್ ಪಿ, ಪ್ರೋಬೇಶನರಿ ಪಿ ಎಸ್ ಐ ಮಹೇಶ್ ಕಂಬಿ, ಪಿ ಸಿ ಘನಶ್ಯಾಮ್ ರವರು ಆರೋಪಿಗಳು ಹೊಳೆನರಸೀಪುರ ದಲ್ಲಿವರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ಹೋಗಿ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.