ಕಾರ್ಕಳ, ನ.13 (DaijiworldNews/PY): "ವಿದ್ಯಾರ್ಥಿಗಳಲ್ಲಿ ಪಠ್ಯಪೂರಕ ಚಟುವಟಿಕೆಗಳ ಅಗತ್ಯವಿದೆ. ಮುಗ್ಧಮನದ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಭಾಷೆಯ ಕುರಿತು ಅಪಾರವಾದ ಒಲವಿರುತ್ತದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾಯಕ ನಮ್ಮಿಂದಾಗಬೇಕು. ಎರಡು ಸಾವಿರ ವರುಷ ಇತಿಹಾಸವಿರುವ ಕನ್ನಡ ಭಾಷೆಗೆ ಇಂದು ಸೋಲಿನ ಅನುಭವವಾಗದಂತೆ ನಾವೆಲ್ಲರೂ ಕಟಿಬದ್ಧರಾಗಿ ದುಡಿಯಬೇಕು. ಭಾಷೆಯಲ್ಲೂ ಸ್ಪರ್ಧಾತ್ಮಕತೆ ಬಂದಿರುವುದು ಖೇದನೀಯ. ಈ ಕಟ್ಟುವ ಪ್ರಕ್ರಿಯೆ ಕೇವಲ ಆರಂಭದಲ್ಲಿದ್ದರೆ ಸಾಲದು, ಬದಲು ಮುಂದುವರಿಕೆಯಲ್ಲೂ, ಸೂರ್ಯಚಂದ್ರರಿರುವವರೆಗೂ ನಡೆಯಬೇಕಾದುದು ಅನಿವಾರ್ಯ" ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ಅವರು ಹೇಳಿದರು.
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ನಮ್ಮ ತುಳುವೆರ್ ಕಲಾ ಸಂಘಟನೆ, ನಾಟ್ಕದೂರು, ಮುದ್ರಾಡಿ ಹಾಗೂ ಶ್ರೀ ಭುವನೇಂದ್ರ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕನ್ನಡಕಾಯಕ ವರ್ಷದ ಪ್ರಯುಕ್ತ ನಡೆದ ‘ತುಳುನಾಡಿನ ನೆಲದಲ್ಲಿ ಕನ್ನಡ ವೃಕ್ಷದ ಬೇರು-ಚಿಗುರುಗಳು’ ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
"ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಸಂಪತ್ತು ಅಂದರೆ ಅಲ್ಲಿನ ಭಾಷೆ. ಅದರಲ್ಲಿ ಆ ಸಂಪತ್ತಾಗಿ ಇಂಗ್ಲೀಷ್ ಆಕ್ರಮಿಸಿಕೊಳ್ಳುತ್ತಿದೆ. ನೆಲದ ಭಾಷೆಗೂ ಅಪಾರ ಪ್ರೀತಿಯನ್ನು ತೋರಬೇಕಾದುದು ನಮ್ಮ ಆದ್ಯ ಕರ್ತವ್ಯ" ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮಾಧವ ಮೂಡುಕೋಣಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿ, "ಕನ್ನಡದ ಕುರಿತು ಯಾವತ್ತೂ ಕೀಳರಿಮೆ ಸಲ್ಲದು. ಕಳೆದುಕೊಳ್ಳುವ ಆತಂಕ ಕನ್ನಡಕ್ಕೂ ಬರಬಾರದು. ನಾವೆಲ್ಲರೂ ಸಂಘಟಿತರಾಗಿ ಕೆಲಸಮಾಡಬೇಕು" ಎಂದರು.
ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಎ. ಶಿವಾನಂದ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿ, "ಇಂತಹ ಕಾರ್ಯಕ್ರಮಗಳು ಮನೋರಂಜನೆಗಾಗಿರುವುದಲ್ಲ ಬದಲು ಮನೋವಿಕಾಸಕ್ಕಿರುವುದು. ನಾವೆಲ್ಲರೂ ಇಂತಹ ಕಾರ್ಯಕ್ರಮಗಳನ್ನು ತುಂಬಾ ಆಸ್ಥೆಯಿಂದ ಗಮನಿಸಿ ಅನುಸರಿಸುವಂತಾಗಬೇಕು"ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ಅವರು ಕಾಲೇಜಿನ ಸಂಪನ್ಮೂಲತೆ ಮತ್ತು ಅದರ ಕೊಡುಗೆಯನ್ನು ಸ್ಮರಿಸಿಕೊಂಡರು.
ನಮ ತುಳುವೆರ್ ಕಲಾ ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ ಜಾಲ ತಮ್ಮ ಸಂಸ್ಥೆಯ ಕುರಿತು ಮಾತನಾಡಿದರು.ಕಾರ್ಯಕ್ರಮದ ಸಂಚಾಲಕ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುಕುಮಾರ ಮುದ್ರಾಡಿ ವಂದಿಸಿದರು. ಶಿವಾನಿ ಭಟ್ ಮತ್ತು ಬಳಗ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕಿ ವನಿತಾ ಶೆಟ್ಟಿ ನಿರೂಪಿಸಿದರು.