ಉಡುಪಿ, ನ.13 (DaijiworldNews/HR): ಸೋಮವಾರ 15 ಸಂಜೆಯೊಳಗೆ ಸಿಬ್ಬಂದಿ ವರ್ಗದವರ ಹಲವು ತಿಂಗಳಿಂದ ಬಾಕಿ ಇರುವ ವೇತನ ಪಾವತಿ, ಹಾಗೂ ರಾಜ್ಯದ ಎಲ್ಲಾ ಡಯಾಲಿಸೀಸ್ ಘಟಕದಲ್ಲಿ ಖಾಲಿಯಾಗಿರುವ ರಾಸಾಯನಿಕ ಸಾಮಾಗ್ರಿ ಹಾಗೂ ಫಿಲ್ಟರ್ ಗಳನ್ನು ಭರ್ತಿ ಮಾಡುವಲ್ಲಿ ಸರಕಾರ ವಿಫಲವಾದರೆ, ಮಂಗಳವಾರ ಬೆಳಿಗ್ಗೆ 11 ರಿಂದ ಉಡುಪಿ ಸರಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಅನ್ಸರ್ ಅಹ್ಮದ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಡಯಾಲಿಸೀಸ್ಗೆ ಅಗತ್ಯ ಇರುವ ರಾಸಾಯನಿಕ ಸಾಮಾಗ್ರಿಗಳು ಹಾಗೂ ಫಿಲ್ಟರ್ಗಳು ಸಂಪೂರ್ಣವಾಗಿ ಖಾಲಿಯಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿರುತ್ತದೆ.
ಕರ್ನಾಟಕದಲ್ಲಿ ಇರುವ ಒಟ್ಟು 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಡಯಾಲಿಸೀಸ್ ಘಟಕದ ಸೇವೆಯ ಗುತ್ತಿಗೆಯನ್ನು ಬಿ.ಆರ್.ಎಸ್. ಕಂಪನಿ ಹಾಗೂ ಉಳಿದ 8 ಜಿಲ್ಲೆಗಳ ಡಯಾಲಿಸಿಸ್ ಘಟಕದ ಸೇವೆಯ ಗುತ್ತಿಗೆಯನ್ನು ಹೊರ ರಾಜ್ಯದ ಸಂಜೀವಿನಿ ಹೆಸರಿನ ಖಾಸಗಿ ಸಂಸ್ಥೆ ವಹಿಸಿಕೊಂಡಿರುತ್ತದೆ. ಎಪ್ರಿಲ್ 2017ರಲ್ಲಿ ಮುಂದಿನ 5 ವರ್ಷಗಳ ವರೆಗಿನ ನಿರ್ವಹಣೆಯ ಒಡಂಬಡಿಕೆಯನ್ನು ಕರ್ನಾಟಕ ಸರಕಾರದೊಂದಿಗೆ ಈ ಖಾಸಗೀ ಕಂಪನಿಗಳು ಮಾಡಿಕೊಂಡಿರುತ್ತದೆ. ಆದರೆ ಬಿ.ಆರ್.ಎಸ್. ಕಂಪನಿ ನಷ್ಟದಲ್ಲಿರುವುದರಿಂದ ಕಳೆದ ಕೆಲವು ತಿಂಗಳ ಹಿಂದೆ ಡಯಾಲಿಸೀಸ್ ಘಟಕದ ನಿರ್ವಹಣೆ ತನ್ನಿಂದ ಅಸಾಧ್ಯವೆಂಬುದಾಗಿ ಸರಕಾರಕ್ಕೆ ಪತ್ರ ಬರೆದಿರುತ್ತದೆ.
ಇದೀಗ ಕರ್ನಾಟಕದ 23 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 122 ಡಯಾಲಿಸೀಸ್ ಘಟಕದ ಸುಮಾರು 1,000ಕ್ಕೂ ಮೇಲ್ಪಟ್ಟ ಸಿಬ್ಬಂದಿಗಳಿಗೆ ಕಳೆದ 5 ತಿಂಗಳುಗಳಿಂದ ವೇತನ ಪಾವತಿಯಾಗಿರುವುದಿಲ್ಲ, ಸರಕಾರ ಹಾಗೂ ಖಾಸಗಿ ಸಂಸ್ಥೆಯ ನಡುವೆ ನಡೆದಿರುವ ಒಪ್ಪಂದದಂತೆ ನಡೆದುಕೊಳ್ಳುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು 30, ಜೂನ್ 2021ರವರೆಗೆ ಸುಮಾರು 33 ಕೋಟಿ ರುಪಾಯಿಗಳನ್ನು ಬಾಕಿ ಇಟ್ಟಿರುವುದೇ ಈ ಎಲ್ಲಾ ತೊಂದರೆಗೆ ಕಾರಣವೆಂಬುದು ಬಿ. ಆರ್. ಎಸ್ ಖಾಸಗೀ ಸಂಸ್ಥೆಯ ಆರೋಪವಾಗಿರುತ್ತದೆ. ಇದು ಸರಕಾರಕ್ಕೆ ಬಡ ಕಾರ್ಮಿಕರ ಹಾಗೂ ರೋಗಿಗಳಬಗ್ಗೆ ಇರುವ ನಿರ್ಲಕ್ಷ ಧೋರಣೆಯನ್ನು ಎತ್ತಿ ತೋರಿಸುತ್ತದೆ.
ಇದರಿಂದಾಗಿ ಬಡ ರೋಗಿಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ರೋಗಿಗಳ ಸಾವು ನೋವು ಸಂಭವಿಸುವ ದಿನಗಳು ದೂರವಿಲ್ಲ, ಇಂತಹ ಘಟನೆಗಳು ಸಂಭವಿಸಿದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ರಾಜ್ಯ ಸರಕಾರ ನೇರ ಹೊಣೆಯಾಗುತ್ತದೆ.
ಸುಧೀರ್ ಪೂಜಾರಿ, ಉಡುಪಿ ತಾಲ್ಲೂಕು ಅಧ್ಯಕ್ಷ ರು, ಕ.ರಾ.ವೇ, ಪ್ರಮೋದ್ ಉಚ್ಚಿಲ, ಯುವಶಕ್ತಿ ಕರ್ನಾಟಕ, ಯೋಗಿಶ್ ಕುತ್ಪಾಡಿ, ಹನೀಫ್ ಕಾರ್ಕಳ ಉಪಸ್ಥಿತರಿದ್ದರು.