ಕಡಬ, ನ.13 (DaijiworldNews/HR): ಯುವತಿಯನ್ನು ಮದುವೆ ಮಾಡಿಕೊಡುವುದಾಗಿ ಭರವಸೆ ನೀಡಿ ವಂಚಿಸಿದ ಎಂಟು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ.
ಆರೋಪಿಗಳಾಗಿದ್ದ ಪ್ರದೀಪ್, ಶಿಬು, ಪ್ರಸಾದ್ ಪಿಕೆ ಮತ್ತು ರುಕ್ಮಿಣಿ ನಿರಪರಾಧಿಗಳೆಂದು ಕೋರ್ಟ್ ತೀರ್ಪು ನೀಡಿದೆ.
ಪ್ರಕರಣದ ಮೊದಲ ಆರೋಪಿ ಪ್ರದೀಪ್ 2012ರ ಡಿ.27ರಂದು ಅಣ್ಣ ಪ್ರಸಾದ್ ಪಿ.ಕೆ., ತಾಯಿ ರುಕ್ಮಿಣಿ ಹಾಗೂ ಸೋದರ ಮಾವ ಶಿಬು ಎಂಬವರು ಸುಮಿತ್ರಾ ಮನೆಯಲ್ಲಿ ಸುಮಾರು 200 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದ ಎನ್ನಲಾಗಿದೆ. ಮೇ 12, 2013 ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿವಾಹವನ್ನು ನಡೆಸಲು ನಿರ್ಧರಿಸಲಾಗಿತ್ತು.
ಸುಮಿತ್ರಾ ಮತ್ತು ಇತರರು ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ವಿತರಿಸಿದ್ದರು. ನಂತರ ಆರೋಪಿಗಳು ಈ ವಿವಾಹದಿಂದ ಹಿಂದೆ ಸರಿದಿದ್ದರು. ಪ್ರದೀಪ್ ಅವರು ತಮ್ಮ ಮಂಗಳೂರಿನ ಕಚೇರಿಯಿಂದ ಬೆಂಗಳೂರಿಗೆ ವರ್ಗಾವಣೆ ಕೋರಿ ಬೆಂಗಳೂರಿಗೆ ತೆರಳಿದ್ದರು. ನಂತರ ಮದುವೆ ಮಾಡಿಕೊಡುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ ಎಂದು ಸುಮಿತ್ರಾ ದೂರು ನೀಡಿದ್ದು, ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡ ಕಡಬ ಪೊಲೀಸರು ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ 13 ಸಾಕ್ಷಿಗಳ ಪೈಕಿ 12 ಮಂದಿಯನ್ನು ವಿಚಾರಣೆ ನಡೆಸಿತು. ಪ್ರಾಸಿಕ್ಯೂಷನ್ ಪರವಾಗಿ ಹತ್ತು ದಾಖಲೆಗಳನ್ನು ಸಲ್ಲಿಸಲಾಯಿತು. ಇಬ್ಬರೂ ವಕೀಲರ ಅಂತಿಮ ವಾದವನ್ನು ಆಲಿಸಿದ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಎನ್, ಪ್ರಕರಣದಲ್ಲಿ ಹೊರಿಸಲಾದ ಆರೋಪಗಳನ್ನು ಯಾವುದೇ ಸಂದೇಹ ಮೀರಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದು, ಆರೋಪಪಟ್ಟಿಯಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದರು.
ಆರೋಪಿಗಳ ಪರವಾಗಿ ವಕೀಲ ಮಹೇಶ್ ಕಜೆ ವಾದ ಮಂಡಿಸಿದ್ದರು.