ಪುತ್ತೂರು, ನ. 12 (DaijiworldNews/SM): ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆದಂ ಆರೋಪಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲೂಕಿನ ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಆದಂ ಕುಂಞ(52) ಮೃತ ವ್ಯಕ್ತಿ. ಎರಡು ದಿನಗಳ ಹಿಂದೆ ಅಸ್ವಸ್ಥತೆ ಹಿನ್ನೆಲೆ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಬೀಡಿ ಬ್ರಾಂಚ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆದಂ ಕುಂಞ ರವರು ಮುಂಡೊಳ ಮಸೀದಿಯ ಜಮಾಅತ್ ಆಡಳಿತ ಕಮಿಟಿಯ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಮತ್ತು ಕುಟುಂಬಸ್ಥ ರನ್ನು ಅಗಲಿದ್ದಾರೆ.
ಆದಂ ಕುಂಞ ರವರ ವಿರುದ್ಧ ಇತ್ತೀಚೆಗೆ ಬಡಗನ್ನೂರು ಗ್ರಾಮದ ದಲಿತ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಅಷ್ಟೇ ಅಲ್ಲದೇ ಪೊಲೀಸರಿಂದ ಬಂಧಿತರಾಗಿ 12 ದಿನ ನ್ಯಾಯಾಂಗ ಬಂಧನದಲ್ಲಿದ್ದರು. ಕೆಲವೇ ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆದಂ ಕುಂಞ ಈ ಘಟನೆಯಿಂದ ನೊಂದುಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದಾಗಿ ಊಟ, ನಿದ್ದೆಯನ್ನು ಸಂಪೂರ್ಣವಾಗಿ ಬಿಟ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸಭ್ಯನಾದ ನನ್ನ ಮರ್ಯಾದೆ ಹೋಯಿತಲ್ಲ ಎಂದು ಕೊರಗುತ್ತಾ ಆಹಾರ ಸೇವಿಸುವುದನ್ನು ಬಿಟ್ಟಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.