ಮಂಗಳೂರು, ನ. 12 (DaijiworldNews/SM): ಪಚ್ಚನಾಡಿ ಬೊಂದೇಲ್ ಸಂಪರ್ಕ ರಸ್ತೆ ದುರಸ್ತಿ ಹಾಗೂ ರೈಲ್ವೇ ಮೇಲ್ಸೇತುವೆ ಕಾಮಗಾರಿ ವೇಗವಾಗಿ ನಡೆದಿದ್ದು, ಅಂತಿಮ ಹಂತದಲ್ಲಿದೆ. ಈಗಾಗಲೇ ರೈಲ್ವೆ ಮೇಲ್ಸೇತುವೆ ಕಾಮಗಾರಿ ರಸ್ತೆ ಕಾಮಗಾರಿ ಸಂಪೂರ್ಣಗೊಂಡಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಸಂಗೀತ ನಾಯಕ್ ತಿಳಿಸಿದ್ದಾರೆ.
ಕಾಮಗಾರಿ ಪೂರ್ಣಗೊಂಡು ಕ್ಯೂರಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆಯಿಂದ ಲಘು ವಾಹನ ಸಂಚಾರಕ್ಕೆ ಸೇತುವೆ ಮೂಲಕ ಅವಕಾಶ ಕಲ್ಪಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಬೈಕ್, ಕಾರು, ಆಟೋ ರಿಕ್ಷಾಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಹತ್ತು ದಿನಗಳ ಬಳಿಕ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಇನ್ನು ಅಕ್ಟೋಬರ್ 10 ರಿಂದ ರೈಲ್ವೇ ಮೇಲ್ಸೇತುವೆ ಇಕ್ಕಳಗಳ ರಸ್ತೆ ಕಾಂಕ್ರಿಟೀಕರಣ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇನ್ನು ಈ ರಸ್ತೆ ಮೂಲಕ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಾರ್ವಜನಿಕರು ಓಡಾಟ ನಡೆಸುತ್ತಿದ್ದಾರೆ. ಸದ್ಯ ಎಲ್ಲರೂ ಸುತ್ತುಬಳಸಿ ತೆರಳುತ್ತಿದ್ದು, ಅಲ್ಪ ಮಟ್ಟಿಗೆ ತ್ರಾಸದಾಯಕವಾಗಿದೆ. ಮತ್ತೊಂದೆಡೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಉಚಿತ ವಾಹನದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.
ಇದೀಗ ಕಾಂಕ್ರಿಟೀಕರಣ ಪೂರ್ಣಗೊಂಡಿದ್ದು ರವಿವಾರದಿಂದ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಸಿಗಲಿದೆ.