ಉಡುಪಿ, ನ. 12 (DaijiworlNews/HR): ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಜಂಕ್ಷನ್ನಲ್ಲಿ ಉಂಟಾಗಿರುವ ವಿವಿಧ ಸಮಸ್ಯೆಗಳನ್ನು ಹತ್ತು ದಿನಗಳಲ್ಲಿ ಪರಿಹರಿಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಭರವಸೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ, ವಾಹನ ಚಾಲಕರಿಗೆ, ರಸ್ತೆ ದಾಟುವ ಪಾದಾಚಾರಿಗಳಿಗೆ ಸಿಂಹಸ್ವಪ್ನವಾಗಿರುವ ಕಲ್ಯಾಣಪುರ-ಸಂತೇಕಟ್ಟೆ ಜಂಕ್ಷನ್ನ 90 ಶೇಕಡಾ ಸಮಸ್ಯೆಗಳನ್ನು ಹತ್ತೇ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ಇಂಜನಿಯರ್ ಸುರೇಶ ಹಾಗೂ ಹೆದ್ದಾರಿಯ ಉಸ್ತುವಾರಿಯನ್ನು ವಹಿಸಿರುವ ನವಯುಗ ಎಂಟರ್ ಪ್ರೈಸಸ್ನ ಪ್ರತಿನಿಧಿ ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ.
ಅವೈಜ್ಞಾನಿಕವಾಗಿ ರಚಿತವಾಗಿರುವ ಕಲ್ಯಾಣಪುರ-ಸಂತೇಕಟ್ಟೆ ಜಂಕ್ಷನ್ನಲ್ಲಿ ದಿನನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಹಸ್ರಾರು ನಾಗರೀಕರ ಪರವಾಗಿ ಸಲ್ಲಿಸಲಾಗಿದ್ದ ದೂರನ್ನು ಅನುಸರಿಸಿ ಕರೆಯಲಾಗಿದ್ದ ಈ ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಸುಬ್ರಮಣ್ಯ ಜೆ.ಎನ್ ವಹಿಸಿದ್ದರು.
ಪ್ರಾರಂಭದಲ್ಲಿ ಸಮಸ್ಯೆಯ ಸಂಪೂರ್ಣ ಚಿತ್ರಣವನ್ನು ಸ್ಲೈಡ್ ಹಾಗೂ ವಿಡಿಯೋ ತುಣುಕುಗಳ ಮೂಲಕ ವಿವರಿಸಿದ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಅವರು ಸ್ಥಳೀಯ ನಾಗರೀಕರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಹೆದ್ದಾರಿಗಳಿರಬೇಕಲ್ಲದೇ ದೋಷಪೂರಿತವಾಗಿರಬಾರದು ಎಂದರು.
ಈ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ಸಹಾಯಕ ಆಯುಕ್ತ ಕೆ.ರಾಜುರವರು ಈ ಸಮಸ್ಯೆಗಳನ್ನು ಈಗಾಗಲೇ ಹಲವಾರು ಸಭೆಗಳಲ್ಲಿ ಚರ್ಚಿಸಲಾಗಿದ್ದು ಪ್ರತಿ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಆಶ್ವಾಸನೆಗಳು ಸಿಗುತ್ತವೆಯೇ ವಿನಹ ಸಮಸ್ಯೆಗಳೆಲ್ಲಾ ಹಾಗೆಯೇ ಉಳಿದಿವೆ ಎಂದರು. ಹೆದ್ದಾರಿಯ ವಿನ್ಯಾಸವನ್ನು ಬದಲಾಯಿಸದೇ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ, ಪ್ರತಿದಿನವೆಂಬಂತೆ ಅಪಘಾತಗಳಾಗುತ್ತಿವೆ, ಟ್ರಾಫಿಕ್ ಪೋಲೀಸ್ರಿಂದಲೂ ನಿಭಾಯಿಸಲು ಅಸಾಧ್ಯವಾದ ಪರಿಸ್ಥಿತಿ ಇದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀ ಕುಮಾರ್ ಚಂದ್ರ ಅಲ್ಲಿರುವ ಬಸ್ ನಿಲ್ದಾಣಗಳನ್ನು ಸೂಕ್ತ ಪ್ರದೇಶಗಳಿಗೆ ವರ್ಗಾಯಿಸಲು ಸಲಹೆ ನೀಡಿದ್ದಾರೆ.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವರವರು ವಿಧ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿ ಮಕ್ಕಳನ್ನು ವಿದ್ಯಾಲಯಗಳಿಗೆ ಕಳುಹಿಸಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ ಎಂದರು.
ನಾಗರೀಕರ ಪರವಾಗಿ ಜೋಸೆಫ್ ಜಿ ಎಂ ರೆಬೆಲ್ಲೊ, ಐವಾನ್ ಮಸ್ಕರೇನಸ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ನಾಯ್ಕ, ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಶೇಕರ ಬೈಕಾಡಿ, ಬಾಪ್ಟಿಸ್ಟ್ ಡಯಾಸ್, ಹರೀಶ್ ಕುಮಾರ್, ಅರುಣ್ ಸನಿಲ್ ಹಾಗೂ ಸುಜೀತ್ರವರು ಚರ್ಚೆಯಲ್ಲಿ ಭಾಗವಹಿಸಿದರು.