ತಲಪಾಡಿ, ನ. 11 (DaijiworldNews/SM): ದೇಶದಲ್ಲಿ ಕೆಲವು ತಿಂಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದ ಪೆಂಟ್ರೋಲ್ ಡಿಸೆಲ್ ಬೆಲೆಯಿಂದಾಗಿ ಜನ ಕಂಗಾಲಾಗಿದ್ದರು. ಈ ನಡುವೆ ಕೇಂದ್ರ ಸರಕಾರ ವ್ಯಾಟ್ ಕಡಿತ ಮಾಡುವ ಮೂಲಕ ಜನರಿಗೆ ಒಂದಿಷ್ಟು ನಿಟ್ಟುಸಿರುವ ಬಿಡುವ ನಿರ್ಧಾರಕ್ಕೆ ಬಂದಿತ್ತು. ಅಲ್ಲದೆ, ರಾಜ್ಯಗಳಲ್ಲಿ ಕೂಡ ವ್ಯಾಟ್ ಕಡಿತಗೊಳಿಸುವಂತೆ ಸಲಹೆ ನೀಡಲಾಗಿತ್ತು. ಆದರೆ, ಕೇರಳ ಸೇರಿದಂತೆ ಹಲವು ರಾಜ್ಯಗಳು ರಾಜ್ಯದ ಸೆಸ್ ಇಳಿಕೆ ಮಾಡಿಲ್ಲ. ಇದರ ಕಾರಣದಿಂದಾಗಿ ಕರ್ನಾಟಕ ಗಡಿ ಭಾಗಗಳಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ.
ಬಿಕೋ ಅನ್ನುತ್ತಿದೆ ಕೇರಳದ ಗಡಿಯಲ್ಲಿರುವ ಪೆಟ್ರೋಲ್ ಪಂಪ್ ಗಳು:
ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಡಿಸೀಲ್-ಪೆಟ್ರೋಲ್ ಬೆಲೆಯಲ್ಲಿ ಬಹಳಷ್ಟು ವ್ಯತ್ಯಾಸವಿದ್ದು, ಈ ಕಾರಣದಿಂದಾಗಿ ಕೇರಳದ ಪೆಟ್ರೋಲ್ ಪಂಪ್ ಗ್ರಾಹಕರಿಲ್ಲದೆ ಬಿಕೋ ಅನ್ನುತ್ತಿದ್ದರೆ, ಗಡಿಭಾಗ ತಲಪಾಡಿಯಲ್ಲಿರುವ ಪೆಟ್ರೋಲ್ ಪಂಪ್ ಗ್ರಾಹಕರಿಂದ ತುಂಬಿ ತುಳುಕುತ್ತಿದೆ. ಕೇರಳ ಗಡಿಭಾಗ ಕುಂಜತ್ತೂರು ಬಳಿಯಿರುವ ಕೇರಳ ಪೆಟ್ರೋಲ್ ಪಂಪ್ ನಲ್ಲಿ ಕಳೆದ ಒಂದು ವಾರದಿಂದ ಗ್ರಾಹಕರಿಲ್ಲ.
ದಿನಕ್ಕೆ 6,000 ಪೆಟ್ರೋಲ್ ಹೋಗುತ್ತಿದ್ದ ಪಂಪ್ ನಲ್ಲಿ ಸದ್ಯ 2 ಸಾವಿರ ಪೆಟ್ರೋಲ್ ಹೋಗುತ್ತಿಲ್ಲ. ಇದರಿಂದ ಶೇ.75 ರಷ್ಟು ನಷ್ಟ ಉಂಟಾಗುತ್ತಿದೆ. ಆರು ಮಂದಿಯಿದ್ದ ಸಿಬ್ಬಂದಿಯನ್ನು 4 ಮಂದಿಗೆ ಇಳಿಸಲಾಗಿದೆ. ಹೀಗೆ ಮುಂದುವರಿದಲ್ಲಿ ಇರುವ ಸಿಬ್ಬಂದಿ ವೇತನವೂ ಕೊಡಲು ಅಸಾಧ್ಯ ಎನ್ನುತ್ತಾರೆ ಕೇರಳ ಪೆಟ್ರೋಲ್ ಪಂಪ್ ಪ್ರಬಂಧಕ ತಾಜುದ್ದೀನ್. 15 ವರ್ಷದಿಂದ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತಿತ್ತು. ಆದರೆ ಇದೀಗ ಗ್ರಾಹಕರು ಪಂಪ್ ಒಳಗೆ ಬಂದು ಬೆಲೆ ವಿಚಾರಿಸಿ ವಾಪಸ್ಸಾಗುತ್ತಿದ್ದಾರೆ. ಗಡಿ ಪ್ರದೇಶದ ಎಲ್ಲಾ ಪಂಪ್ ಗಳಿಗೂ ಇದೇ ಕೊರಗು. ಕೇರಳ ಸರ್ಕಾರ ಇದನ್ನು ಮನಗಂಡು ಅಬಕಾರಿ ಸುಂಕವನ್ನು ಇಳಿಕೆ ಮಾಡಿದಲ್ಲಿ ವ್ಯವಹಾರ ಮುಂದುವರಿಸಲು ಸಾಧ್ಯ ಅನ್ನುತ್ತಾರೆ ಪಂಪ್ ಸಿಬ್ಬಂದಿ ಹರೀಶ್.
ಒಂದು ವಾರದಿಂದ ಅಬಕಾರಿ ಸುಂಕ ಕಡಿಮೆ ಮಾಡಿರುವುದರಿಂದ ಕೇರಳದ ಗ್ರಾಹಕರು ಕರ್ನಾಟಕದ ಪೆಟ್ರೋಲ್ ಪಂಪನ್ನು ಆಶ್ರಯಿಸುವಂತಾಗಿದೆ. ಕೇರಳ ಮತ್ತು ಕರ್ನಾಟಕ ನಡುವೆ ಡಿಸೇಲ್ ಗೆ 8.5ರೂ. ಮತ್ತು ಪೆಟ್ರೋಲ್ ಗೆ 5.5 ರೂ ವ್ಯತ್ಯಾಸವಿರುವುದರಿಂದ ಕೇರಳದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ತಲಪಾಡಿ ಪೆಟ್ರೋಲ್ ಪಂಪ್ ಗೆ ಬರುತ್ತಿದ್ದಾರೆ. ಹಿಂದೆಗಿಂತ ಮಾರಾಟ ಅಧಿಕವಾಗಿದೆ. ಕೊರೊನಾ ಸಂಧಿಗ್ದ ಸಂದರ್ಭ ಕಂಗೆಟ್ಟು ಹೋಗಿದ್ದ ವ್ಯವಹಾರಕ್ಕೆ ಸದ್ಯ ಸಹಾಯವಾಗಿದೆ. ಈ ಹಿಂದೆ 200 ವಾಹನಗಳು ಬರುತಿತ್ತು. ಆದರೆ ಇದೀಗ 600ಕ್ಕೂ ಅಧಿಕ ವಾಹನಗಳು ಬರುತ್ತಿದೆ. ಕೇರಳದವರಿಗೆ ಈ ಪೆಟ್ರೋಲ್ ಪಂಪ್ ಬರಬೇಕಾದರೆ ಟೋಲ್ ಪಾವತಿಸಬೇಕಾಗಿಲ್ಲ. ಬಹುತೇಕ ಕೇರಳದ ಗ್ರಾಹಕರು ಇಲ್ಲೇ ಬರುತ್ತಿದ್ದಾರೆ. 35 ವರ್ಷಗಳಿಂದ ಪಂಪ್ ಕಾರ್ಯಾಚರಣೆಯಲ್ಲಿದ್ದು, ದೊಡ್ಡ ಮೊತ್ತದ ವ್ಯತ್ಯಾಸ ಇದೇ ಮೊದಲ ಬಾರಿ ಆಗಿದೆ ಎಂಬುವುದು ತಲಪಾಡಿ ಪೆಟ್ರೋಲ್ ಪಂಪ್ ಮ್ಯಾನೇಜರ್ ಮಹೇಶ್ ಅವರ ಅಭಿಪ್ರಾಯ.
ಕರ್ನಾಟಕದಲ್ಲಿ ಇಷ್ಟೊಂದು ವ್ಯತ್ಯಾಸ ಇರುವುದರಿಂದ ಕೇರಳ ಸರಕಾರ ಸಭೆಯನ್ನು ಕರೆದಿರುವುದು ಅಲ್ಲಿನ ಗ್ರಾಹಕರಿಂದ ತಿಳಿದುಬಂತು. ಶೀಘ್ರದಲ್ಲೇ ಅವರು ಸ್ವಲ್ಪ ಕಡಿಮೆ ಮಾಡುವ ಸಾಧ್ಯತೆಗಳಿವೆ. ಆದರೆ ಕರ್ನಾಟಕದಷ್ಟು ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುವುದು ಸಿಬ್ಬಂದಿಯೊಬ್ಬರ ಮಾತು.
ಸದ್ಯ ಕೇರಳ ಸರಕಾರ ತೈಲ ಬೆಲೆ ಇಳಿಕೆ ಮಾಡದೇ ಇರುವುದು ಗಡಿ ಆಸುಪಾಸಿನಲ್ಲಿದ್ದ ಕೇರಳ ಪಂಪ್ ಮಾಲಕರಿಗೆ ಮುಲುವಾಗಿದೆ. ಆದರೆ, ಕರ್ನಾಟಕದ ಪಂಪ್ ಮಾಲಕರಿಗೆ ವರವಾಗಿ ಪರಿಣಮಿಸಿದೆ.